ನವದೆಹಲಿ: ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಸ್ಮೃತಿ ಇರಾನಿ ಅವರ ರಾಜೀನಾಮೆಗಾಗಿ ಕಾಂಗ್ರೆಸ್ ಆಗ್ರಹ ಮಾಡಿರುವುದನ್ನು ಸರ್ಕಾರ ಬುಧವಾರ ತಿರಸ್ಕರಿಸಿದೆ. ಸ್ಮೃತಿ ಇರಾನಿ ಅವರು ‘ನಕಲಿ ಪದವಿ’ ಹಾಗೂ ಸುಷ್ಮಾ ಸ್ವರಾಜ್ ಅವರು ‘ಲಲಿತ್ ಗೇಟ್’ ಆರೋಪಗಳನ್ನು ಎದುರಿಸುತ್ತಿದ್ದಾರೆ.
“ನಮ್ಮ ಸಚಿವರು ರಾಜೀನಾಮೆ ನೀಡುವುದಿಲ್ಲ. ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಇದು ಎನ್ ಡಿ ಎ ಸರ್ಕಾರ” ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಪುಟ ಸಭೆಯ ನಿರ್ಧಾರಗಳನ್ನು ವರದಿಗಾರರಿಗೆ ತಿಳಿಸುವಾಗ ಹೇಳಿದ್ದಾರೆ.
ಗೃಹಸಚಿವರು ತಮ್ಮ ಸಂಪುಟ ಸಚಿವರು ರಾಜೀನಾಮೆ ನೀಡುವುದನ್ನು ನಿರಾಕರಿಸಿದ್ದಾರೆ, ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಇದಕ್ಕೆ ಕಾರಣ ನೀಡಿ “ನಾವು ಯುಪಿಎ ಸರ್ಕಾರ ಮಾಡಿದ್ದನ್ನು ಮಾಡಿಲ್ಲ” ಎಂದಿದ್ದಾರೆ.
“ನಾನು ಹೇಳುವುದೇನೆಂದರೆ ಯುಪಿಎ ಸಚಿವರು ಮಾಡುತ್ತಿದ್ದನ್ನೆಲ್ಲಾ ನಮ್ಮ ಸಚಿವರು ಮಾಡುತ್ತಿಲ್ಲ” ಎಂದು ಯುಪಿಎ ಸರ್ಕಾರದ ವೇಳೆಯಲ್ಲಿ ನಡೆದ ಹಗರಣಗಳಿಗೆ ಹೋಲಿಸಿ ಹೇಳಿದ್ದಾರೆ.
ಬಿಜೆಪಿ ಸಂಸದ ಆರ್ ಕೆ ಸಿಂಗ್ ಅವರು ಲಲಿತ್ ಮೋದಿಗೆ ಸಹಾಯ ಮಾಡುವುದು ನೈತಿಕವಾಗಿ, ಕಾನೂನಾತ್ಮಕವಾಗಿ ತಪ್ಪು ಎಂದು ನೆನ್ನೆ ಹೇಳಿದ್ದ ಹಿನ್ನಲೆಯಲ್ಲಿ ಈ ಸಚಿವರು ಹೇಳಿಕೆಗಳನ್ನು ನೀಡಿದ್ದಾರೆ.