ಲಖನೌ: ಉತ್ತರ ಪ್ರದೇಶದ ಪತ್ರಕರ್ತ ಜಗೇಂದರ್ ಸಿಂಗ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸಚಿವ ರಾಮಮೂರ್ತಿ ಅವರನ್ನು ಸೂಕ್ತ ತನಿಖೆ ನಡೆಸದೆ ಸಚಿವ ಸಂಪುಟದಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಮತ್ತೋರ್ವ ಸಚಿವ ಶಿವ್ ಪಾಲ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಕೊಲೆ ಆರೋಪ ಎದುರಿಸುತ್ತಿರುವ ಸಚಿವ ರಾಮಮೂರ್ತಿ ಅವರನ್ನು ವಜಾಗೊಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವ್ ಪಾಲ್ ಯಾದವ್, ರಾಮಮೂರ್ತಿ ಅವರನ್ನು ಸಮರ್ಥಿಸಿಕೊಂಡಿದ್ದು, ಈ ಹಿಂದೆಯೂ ಕೆಲ ಸಚಿವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಆದರೆ ಅದನ್ನು ಸಾಬೀತುಪಾಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಹಿಂದುಳಿದ ವರ್ಗದ ಕಲ್ಯಾಣ ಸಚಿವ ರಾಮಮೂರ್ತಿ ವರ್ಮಾ ವಿರುದ್ಧ ಬರೆದಿದ್ದ ಜಗೇಂದ್ರ ಸಿಂಗ್ ಎಂಬ ಪತ್ರಕರ್ತನನ್ನು ಸಚಿವನ ಬೆಂಬಲಿಗರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು. ಪ್ರಕರಣದ ಇನ್ನಿತರ ಆರೋಪಿಗಳೊಂದಿಗೆ ರಾಮಮೂರ್ತಿ ವರ್ಮಾ ಸಹ ಕಣ್ಮರೆಯಾಗಿದ್ದು ಸಚಿವನ ವಿರುದ್ಧ ಅನುಮಾನ ಮತ್ತಷ್ಟು ಬಲವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಸಚಿವನನ್ನು ಕೂಡಲೇ ವಜಾಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಸಮಾಜವಾದಿ ಪಕ್ಷ ಮಾತ್ರ ಸಚಿವನನ್ನು ವಜಾಗೊಳಿಸಲು ಸಿದ್ಧವಿಲ್ಲ.