ನವದೆಹಲಿ: ನಮಾಜ್ ಮಾಡುವಂತೆ ಯೋಗಿ ಆದಿತ್ಯನಾಥ್ ಗೆ ಸಲಹೆ ನೀಡಿದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಧೈರ್ಯವಿದ್ದರೆ ಅಜಂಖಾನ್ ಜೈ ಶ್ರೀರಾಮ್ ಎಂದು ಹೇಳಲಿ ಎಂದು ಭಾನುವಾರ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಉನ್ನಾವೋದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾವು ಭಾರತೀಯ ಸಂಸ್ಕೃತಿ ಹಾಗೂ ಧರ್ಮವನ್ನು ಅನುಸರಿಸುವವರು, ಭಾರತೀಯ ಸಂಸ್ಕೃತಿಯಲ್ಲಿ ಅಲ್ಲಾಹ, ಭಗವಾನ್ ಅಥವಾ ಯಾವುದೇ ದೇವರಾದರೂ ಭಿನ್ನತೆ ಎಂಬುದಿಲ್ಲ. ನಾವು ಅಲ್ಲಾಹ ಹೋ ಅಕ್ಬರ್ ಎಂದು ಹೇಳುತ್ತೇವೆ. ಧೈರ್ಯವಿದ್ದರೆ ಅಜಂಖಾನ್ ಅವರು ಜೈ ಶ್ರೀರಾಮ್ ಎಂದು ಹೇಳಲಿ ಎಂದು ಹೇಳಿದ್ದಾರೆ.
ಯೋಗ ದಿನದಂದು ಸೂರ್ಯ ನಮಸ್ಕಾರ ಮಾಡುವ ಕುರಿತಂತೆ ಭಾರತ ಮುಸ್ಲಿಮರ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಮತ್ತು ಮನಸ್ಸು ಶುದ್ಧಗೊಳ್ಳುತ್ತದೆ. ಇಂತಹ ಆರೋಗ್ಯಕರ ಯೋಗದ ಭಾಗವಾಗಿರುವ ಸೂರ್ಯ ನಮಸ್ಕಾರವನ್ನು ವಿರೋಧಿಸುವ ಜನರು ಸಮುದ್ರದಲ್ಲಿ ಬೀಳಲಿ ಇಲ್ಲವೇ ಭಾರತ ಬಿಟ್ಟು ಹೋಗಲಿ ಎಂದು ಹೇಳಿದ್ದರು.
ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆ ವಾಗ್ಧಾಳಿ ನಡೆಸಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರು, ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಯೋಗಿ ಆದಿತ್ಯನಾಥ್ ಅವರು ನಮಾಜ್ ಮಾಡಲಿ. ಎಲ್ಲಿಯವರೆಗೂ ಸೂರ್ಯ ನಮಸ್ಕಾರ ಮಾಡಬೇಕು ಎಂದು ನಮ್ಮನ್ನು ಒತ್ತಾಯಿಸುತ್ತಾರೋ, ಅಲ್ಲಿಯವರೆಗೂ ನಾನು ನಮಾಜ್ ಮಾಡುಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.