ನವದೆಹಲಿ: ಮಾವು ರಫ್ತು ನಿಷೇಧದಿಂದ ಸಾಕಷ್ಟು ನಷ್ಟ ಅನುಭವಿಸಿರುವ ರೈತರ ಪಾಲಿಗೊಂದು ಕಹಿ ಸುದ್ದಿ. ಭಾರತದಿಂದ ಆಮದಾಗುವ ಹಸಿ ಮೆಣಸಿನಕಾಯಿಗೆ ಈಗ ಸೌದಿ ಅರೇಬಿಯಾ ನಿಷೇಧ ಹೇರಿದೆ.
ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೌದಿ ಸರ್ಕಾರ ಈ ಸಂಬಂಧ ಭಾರತದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ)ಕ್ಕೂ ಈ ಸಂಬಂಧ ಮಾಹಿತಿ ನೀಡಿದೆ.
ಈ ನಿಷೇಧವು ಮೇ 30ರಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈ ನಿಷೇಧಕ್ಕೆ ಸಂಬಂಧಿಸಿ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೌದಿ ಸರ್ಕಾರದೊಂದಿಗೆ
ಸಂಪರ್ಕದಲ್ಲಿದೆ. ಜತೆಗೆ, ಭಾರತೀಯ ಕಂಪನಿಗಳಿಗೂ ರಫ್ತು ಮಾಡುವ ಮೊದಲು ಆಹಾರ ಧಾನ್ಯಗಳ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಕರ್ನಾಟಕವು ಅತಿ ಹೆಚ್ಚು ಮೆಣಸಿನ ಕಾಯಿ ಉತ್ಪಾದಿಸುವ ರಾಜ್ಯಗಳಲ್ಲೊಂದು.
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಹಸಿಮೆಣಸಿನ ಕಾಯಿ ಬೆಳೆಯಲಾಗುತ್ತದೆ. ಇದರಿಂದ ಕರ್ನಾಟಕದ ಬೆಳೆಗಾರರ ಮೇಲೂ ಹಸಿಮೆಣಸಿನ ಕಾಯಿ ನಿಷೇಧದ ಬಿಸಿ ತಟ್ಟಲಿದೆ.