ನವದೆಹಲಿ: ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬಿಹಾರ ಚುನಾವಣೆ ಹತ್ತಿರವಾಗುತ್ತಿದ್ದು. ಕಾಂಗ್ರೆಸ್, ಆರ್ಜೆಡಿ ಮತ್ತು ಜೆಡಿಯು ಪಕ್ಷಗಳು ಒಗ್ಗೂಡಿ ಒಮ್ಮತದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ಘೋಷಿಸಿದ ಬೆನ್ನಲ್ಲೇ, ಬಿಹಾರ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮ್ ಮೋರ್ಚಾ ನಾಯಕ (ಎಚ್ಎಎಮ್) ಜೀತನ್ ರಾಮ್ ಮಾಂಝಿ ಬಿಜೆಪಿ ಜತೆ ಹಸ್ತ ಮಿಲಾಯಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗಿನ 30 ನಿಮಿಷಗಳ ಚರ್ಚೆಯ ನಂತರ ವರದಿಗಾರರ ಜತೆ ಮಾತನಾಡುತ್ತಿದ್ದ ಮಾಂಝಿ, ಚುನಾವಣೆಯಲ್ಲಿ ಜನತಾ ಪರಿವಾರಕ್ಕೆ ಸೋಲುಣಿಸಲು ಬಲಿಷ್ಠ ಮೈತ್ರಿಯ ಅಗತ್ಯವಿದೆ. ಬಿಹಾರದಲ್ಲಿ ಈಗಾಗಲೇ ಲಾಲು ಮತ್ತು ನಿತೀಶ್ ಅವರ ಅಪವಿತ್ರ ಮೈತ್ರಿ ರಚಿತವಾಗಿದೆ. ಈ ಕುರಿತು ನಾನು ಅಮಿತ್ ಶಾ ಅವರ ಜತೆ ಮಾತನಾಡಿದ್ದೇನೆ. ಲಾಲು ಮತ್ತು ನಿತೀಶ್ ಅಧಿಕಾರಕ್ಕೆ ಬರದಂತೆ ತಡೆಯಲು ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
“ನಾನು ಬಿಜೆಪಿಗೆ ಬೆಂಬಲ ಸೂಚಿಸಿದ್ದೇನೆ. ಸೀಟು ಹಂಚಿಕೆ ಕುರಿತು ಇನ್ನೂ ಮಾತುಕತೆ ನಡೆದಿಲ್ಲ. ಜೂನ್ 15ರಂದು ಸಭೆ ನಡೆಸಿದ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಚುನಾವಣೆಯಲ್ಲಿ ಗೆದ್ದ ಬಳಿಕವಷ್ಟೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ”, ಎಂದು ಮಾಂಝಿ ಹೇಳಿದ್ದಾರೆ.