ನವದೆಹಲಿ, ಜೂ.12-ಭಾರೀ ಅಕ್ರಮ ನಡೆದಿದೆ ಎನ್ನಲಾದ ಅಖಿಲ ಭಾರತ ಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ (ಎಐಪಿಎಂಟಿ) ಫಲಿತಾಂಶ ಪ್ರಕರಣದ ಮೇಲಿನ ತಡೆಯಾಜ್ಞೆಯನ್ನು ಸವೋಚ್ಚ ನ್ಯಾಯಾಲಯ ಮತ್ತೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಇಂದಾದರೂ ಫಲಿತಾಂಶ ಬರಬಹುದೆಂದು ಕಾತರದಿಂದ ಕಾಯುತ್ತಿದ್ದ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆಯಾಗಿದೆ.
ಜೂನ್ 5 ರಂದು ಫಲಿತಾಂಶ ಪ್ರಕಟವಾಗಬೇಕಾಗಿತ್ತು. ಆದರೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅದನ್ನು ಜೂ.8ಕ್ಕೆ ಮುಂದೂಡಿತ್ತು. ನಂತರ ಜೂ.8 ರಂದು ನ್ಯಾಯಾಲಯ ಮತ್ತೆ ಅದನ್ನು ಜೂನ್ 12ಕ್ಕೆ ವಿಸ್ತರಿಸಿತ್ತು. ಆದ್ದರಿಂದ ಇಂದಾದರೂ ಫಲಿತಾಂಶ ಬರಬಹುದೆಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಚಿತ್ರ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಕಡೆಗೆ ನೆಟ್ಟಿತ್ತು. ಆದರೆ ನ್ಯಾಯಾಲಯ ಇಂದು ಕೂಡ ಫಲಿತಾಂಶ ಪ್ರಕಟಣೆಯ ಮೇಲಿನ ತಡೆಯನ್ನು ವಿಸ್ತರಿಸಿತು.
ಹಿನ್ನೆಲೆ:ಅಖಿಲ ಭಾರತ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಮೇ. 3 ರಂದು ದೇಶಾದ್ಯಂತ ನಡೆದಿತ್ತು. ಸುಮಾರು 6 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಜೂ. 5 ರಂದು ಫಲಿತಾಂಶಗಳು ಪ್ರಕಟವಾಗಬೇಕಾಗಿತ್ತು. ಆದರೆ ಈ ಮಧ್ಯೆ ಎಐಸಿಎಂಟಿ
ಪರೀಕ್ಷೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಸಿಬಿಎಸ್ಇ ನಡೆಸಿರುವ ಈ ಪರೀಕ್ಷೆಯನ್ನೇ ರದ್ದು ಮಾಡಿ ಮೂರು ಪರೀಕ್ಷೆ ನಡೆಸದಂತೆ ನಿದೇಶಿಸಬೇಕು ಎಂದು ಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಫಲಿತಾಂಶ ಪ್ರಕಟಣೆಗೆ ಜೂ. 10 ರವರೆಗೆ ತಡೆ ನೀಡಿ, ಜೂ.12ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿತ್ತು.
ಜೂ.10 ತಪ್ಪಿದ ನಂತರ ಜೂ.12 ರಂದು ಫಲಿತಾಂಶ ನಿಶ್ಚಿತ ಎಂದು ವಿದ್ಯಾರ್ಥಿಗಳು, ಪೋಷಕರು ನಿರೀಕ್ಷೆಯಲ್ಲಿದ್ದರು. ಆದರೆ, ನ್ಯಾಯಮೂರ್ತಿಗಳಾದ ಆರ್.ಕೆ.ಅಗರವಾಲ್ ಹಾಗೂ ಅಮಿತಾವರಾಯ್ ಅವರಿದ್ದ ರಜೆ ಕಾಲದ ಪೀಠ ಇಂದು ತಡೆ ವಿಸ್ತರಿಸಿತು.
ನ್ಯಾಯಾಲಯದ ಆದೇಶದ ಪ್ರಕಾರ ತನಿಖೆ ನಡೆಸಿದ ಪೊಲೀಸರು ಅಕ್ರಮ ನಡೆದಿರುವುದು ನಿಜ ಎಂದು ವರದಿ ಸಲ್ಲಿಸಿದರು. ಬಿಹಾರ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ಗಳಲ್ಲಿ 75 ಮೊಬೈಲ್ಗಳ ಮೂಲಕ 123 – ಉತ್ತರಗಳು ಹರಿದಾಡಿದ್ದವು ಎಂಬ ಅಂಶವೂ ಬಯಲಾಯಿತು.