ತುರ್ತು ಸಂದರ್ಭದಲ್ಲಿ ಚೈನ್ ಎಳೆದು ರೈಲು ನಿಲ್ಲಿಸುವ ಪದ್ಧತಿಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎನ್ನುವ ಮೂಲಕ ರೈಲ್ವೆ ಸಚಿವಾಲಯ ಯೂ ಟರ್ನ್ ಹೊಡೆದಿದೆ.
ಪ್ರಯಾಣಿಕರು ಚೈನ್ ಎಳೆಯುವ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಇದರಿಂದ ರೈಲುಗಳ ಸಂಚಾರದಲ್ಲಿ ಅನಗತ್ಯ ವಿಳಂಬವಾಗಿ ಇಲಾಖೆಗೆ ಸುಮಾರು 3 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಹಾಗಾಗಿ ಈ ಸೌಲಭ್ಯವನ್ನು ತೆಗೆದುಹಾಕಿ, ರೈಲು ಚಾಲಕರಿಗೆ ನೇರವಾಗಿ ಮೊಬೈಲ್ ಫೋನ್ ಕರೆ ಮಾಡುವ ಪದ್ಧತಿ ಜಾರಿಗೊಳಿಸುತ್ತೇವೆ ಎಂದು ರೈಲ್ವೆ ಸಚಿವಾಲಯ ಹೇಳಿತ್ತು.
ಆದರೆ ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ತನ್ನ ನಿಲುವು ಬದಲಿಸಿದ ರೈಲ್ವೆ ಸಚಿವಾಲಯ ಗುಡ್ಡಗಾಡು ಪ್ರದೇಶಗಳಲ್ಲಿ ರೈಲು ಸಂಚರಿಸುವಾಗ ಮೊಬೈಲ್ ಫೋನ್ಗಳ ಸಿಗ್ನಲ್ಗಳು ಸಿಗುವುದಿಲ್ಲ.ಇದರಿಂದ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಅನಗತ್ಯವಾಗಿ ಚೈನ್ ಎಳೆಯುವುದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ನಷ್ಟವಾಗುತ್ತಿದ್ದರೂ ಸಹ ಹಿಂದಿನ ಪದ್ದತಿಯನ್ನೇ ಮುಂದುವರೆಸುತ್ತೇವೆ. ಆದರೆ ಪ್ರಯಾಣಿಕರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದೆ.