ನವದೆಹಲಿ: ತನ್ನ ಸ್ವಂತ ಸೋದರಳಿಯ ಮತ್ತು ಅವರ ಪತ್ನಿ ಮೇಲೆ ಹಲ್ಲೆ ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಕಿರಿಯ ಸಹೋದರ ಸುಭಾಷ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಪೊಲೀಸರ ಪ್ರಕಾರ ಗುರುವಾರ ಬೆಳಿಗ್ಗೆ 9.30 ರ ಸುಮಾರಿಗೆ ನೈರುತ್ಯ ದೆಹಲಿಯ ಇಂದೇರ್ಪುರಿಯಲ್ಲಿರುವ ತನ್ನ ಸೋದರಳಿಯನ ಮನೆಗೆ ಹಾಕಿ ಸ್ಟಿಕ್ನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋದ ಕುಮಾರ್, ಅನೇಕ ಬಾರಿ ಕದ ತಟ್ಟಿದ. ಕದ ತೆರೆಯದಿದ್ದಾಗ ಕೋಪಗೊಂಡ ಆತ ಕದವನ್ನು ಒಡೆದು ಒಳಗೆ ಹೋಗಿ ಅಳಿಯ ಮತ್ತು ಆತನ ಪತ್ನಿಗೆ ಮನ ಬಂದಂತೆ ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ನಡುವೆ ಈ ಹಿಂದೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ದಂಪತಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಕುಮಾರ್ನನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಆತ ಪೇದೆಯೊಬ್ಬನ ಕಪಾಳಕ್ಕೆ ಬಾರಿಸಿದ್ದಾನೆ.
ಆತನನ್ನು ಬಂಧಿಸಿದ ಪೊಲೀಸರು ಐಪಿಸಿಯ ವಿವಿಧ ವಿಭಾಗಗಳಡಿ ಆರೋಪವನ್ನು ದಾಖಲಿಸಿದ್ದಾರೆ. ಸದ್ಯ ಜಾಮೀನಿನ ಮೇಲಾತ ಬಿಡುಗಡೆಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.