ಢಾಕಾ, ಜೂ.7: ಬಾಂಗ್ಲಾ ಭೇಟಿಯ ಎರಡನೆ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಬಾಂಗ್ಲಾ ಬಾಲಕಿಯರ ಮೈತ್ರಿ ವಸತಿಗೃಹ, ಕುಮುದಿನಿ ಆಸ್ಪತ್ರೆ, ಢಾಕಾ ವಿವಿಯಲ್ಲಿ ಹಿಂದಿ ವಿಭಾಗ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.
ನಂತರ 12ನೆ ಶತಮಾನದ ಹೆಸರಾಂತ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಢಾಕೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲೇ ಸಮೀಪದಲ್ಲಿರುವ ಶಿವ ಮಂದಿರಕ್ಕೂ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡರು. ಅರ್ಚಕರು ಮೋದಿಯವರಿಗೆ ಹೂವಿನ ಹಾರ, ಶಾಲು ಹೊದಿಸಿ ಸನ್ಮಾನಿಸಿದರು. ಇದಕ್ಕೂ ಮುನ್ನ ನರೇಂದ್ರ ಮೋದಿ ಕೋಲ್ಕತ್ತಾದ ಬೇಲೂರು ರಾಮಕೃಷ್ಣ ಮಠದ ಶಾಖಾಮಠವಾದ ಶ್ರೀರಾಮಕೃಷ್ಣ ಮಠ ಸಂಸ್ಥೆಗೆ ಭೇಟಿ ನೀಡಿ ಸ್ವಾಮೀಜಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲಿಂದ ನೇರವಾಗಿ, ರಾಜಧಾನಿ ಢಾಕಾದ ವಾರಿಧಾರಾ ಪ್ರದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿದರು. ಭಾರತೀಯ ರಾಯಭಾರಿ ಕಚೇರಿಯಲ್ಲಿ ಉಭಯ ದೇಶಗಳ ಸ್ನೇಹ-ಮೈತ್ರಿಗಳಿಗೆ ಸಂಬಂಧಿಸಿದಂತೆ ಅನೇಕ ಯೋಜನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.