ನವದೆಹಲಿ, ಮೇ 31- ಇದೇ ಮೊದಲ ಬಾರಿಗೆ ದೇಶದ ರೈತರ ಹಿತರಕ್ಷಣೆಗಾಗಿ ಸರ್ಕಾರದಿಂದ ಕಿಸಾನ್ ವಾಹಿನಿ ಟಿವಿ ಚಾನೆಲ್ ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ತಮ್ಮ ಮನ್ಕಿ ಬಾತ್ 8ನೆ ಆವೃತ್ತಿಯಲ್ಲಿ ಹೇಳಿದ್ದಾರೆ. ಇಂದು ಬೆಳಗ್ಗೆ ಆಕಾಶವಾಣಿ ಮೂಲಕ ದೇಶದ ಜನತೆಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು
ಹಂಚಿಕೊಂಡ ಮೋದಿ, ಬಡವರ ಅಭಿವೃದ್ಧಿ ಬಗ್ಗೆ ನನ್ನೆದೆ ಸದಾ ತುಡಿಯುತ್ತಿದೆ. ಜನ ನನ್ನ ಮೇಲಿಟ್ಟಿದ್ದ ವಿಶ್ವಾಸ ಕುಗ್ಗಿಲ್ಲ ಎಂದು ತಿಳಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ರೈತ ಸಮುದಾಯ ಮತ್ತು ವಿದ್ಯಾರ್ಥಿ ಸಮೂಹ ಕೈ ಜೋಡಿಸಬೇಕು. ವಿದ್ಯಾರ್ಥಿಗಳು ಶ್ರಮ ಪಟ್ಟು ವ್ಯಾಸಂಗ ಮಾಡುತ್ತೀರಿ. ಒಂದು ವೇಳೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಧೃತಿಗೆಡದೆ ಛಲದಿಂದ ಮುನ್ನಡೆಯಬೇಕು. ದೇಶದ ಅಭಿವೃದ್ಧಿಯ ಕನಸಿನೊಂದಿಗೆ ವಿದ್ಯಾರ್ಥಿಗಳು ಕೂಡ ತಮ್ಮ ಕನಸುಗಳನ್ನು ಬೆಸೆಯಬೇಕು. ದೇಶದ ಅಭಿವೃದ್ಧಿಯಲ್ಲಿ ಎಲ್ಲರ ಪಾಲಿದೆ ಎಂದು ಮೋದಿ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಅವರವರ ಅಭಿರುಚಿಗೆ ತಕ್ಕಂತೆ ಭವಿಷ್ಯ ಆಯ್ದುಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ದೇಶದ ಸೈನಿಕರ ಬಹುದಿನಗಳ ಬೇಡಿಕೆಯಾಗಿರುವ ಒನ್ ರ್ಯಾಂ ಕ್ ಒನ್ ಪೆನ್ಷನ್ ಯೋಜನೆಯೂ ಸೇರಿದಂತೆ ಹಲವು ಜನಪರ ಯೋಜನೆಗಳ ಜಾರಿ ವಿಷಯ ಜಟಿಲವಾಗಿದೆ. ಆದರೂ ಅವುಗಳ ಜಾರಿಗೆ ನಾವು ಕಟಿಬದ್ಧರಾಗಿದ್ದೇವೆ. ಆದರೆ, ಅವಕ್ಕೆಲ್ಲ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು. ಪ್ರವಾಸೋದ್ಯಮದ ಬಗ್ಗೆ ಹೆಚ್ಚು ಆದ್ಯತೆ ನೀಡಲು ತಿಳಿಸಿದ ಅವರು, ಹಿಮಾಲಯದ ಸೌಂದರ್ಯ ಕಾಪಾಡಬೇಕಾಗಿದೆ ಎಂದು ತಿಳಿಸಿದರು. ಎಲ್ಲ ದೇಶಗಳ ಸಹಮತದೊಂದಿಗೆ ಅಂತಾರಾಷ್ಟ್ರೀಯ ಯೋಗದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಜೂ.21ರಂದು ಯೋಗದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಬಿಸಿಲ ತಾಪ:
ದೇಶದಲ್ಲಿ ಬಿಸಿಲಿನ ತಾಪ ಮಿತಿಮೀರಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇದು ಅತ್ಯಂತ ಬೇಸರದ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಏರುತ್ತಿರುವ ಬಿಸಿಲಿನಿಂದ ರಕ್ಷಣೆ ಪಡೆಯಲು ಜನತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಜನತೆಗೆ ಸಲಹೆ ನೀಡಿದರು. ಈ ಮೊದಲು ಯಾವತ್ತೂ ದೇಶದಲ್ಲಿ ಇಂತಹ ಮಟ್ಟದಲ್ಲಿ ಬಿಸಿಲಿನ ಝಳ ಪ್ರಕೋಪಕ್ಕೆ ಹೋಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.