ರೈಲಿನಲ್ಲಿ ಪ್ರಯಾಣಿಕನೊಬ್ಬ ಬಾಂಬ್ ಸಾಗಿಸುತ್ತಿದ್ದ ಸಮಯದಲ್ಲಿ ಬಾಂಬ್ ಗಳು ಸ್ಪೋಟಗೊಂಡು 14 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.
ಮಂಗಳವಾರ ಬೆಳಿಗ್ಗೆ ಸೆಲ್ಡಾ&ಕೃಷ್ಣಾನಗರ್ ರೈಲು ಟಿಟಾಗಢ್ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಬಾಂಬ್ ಗಳು ಬೋಗಿಯೊಳಗೆ ಸ್ಫೋಟಗೊಂಡಿತ್ತು. ರೈಲಿನ 5ನೇ ಬೋಗಿಯೊಳಗೆ ಶಂಕಿತ ಇಬ್ಬರು ಕ್ರಿಮಿನಲ್ ಗಳ ನಡುವೆ ಜಗಳ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಬಾಂಬ್ ತೀವ್ರತೆ ಕಡಿಮೆ ಇದ್ದ ಕಾರಣ ಭಾರಿ ಅನಾಹುತವೊಂದು ತಪ್ಪಿದ್ದು ತಕ್ಷಣ ಆಗಮಿಸಿದ ಪೊಲೀಸರು ಬಾಂಬ್ ಕೊಂಡೊಯ್ಯುತ್ತಿದ್ದ ರಾಜಾ ಅಲಿಯಾಸ್ ರಾಜುದಾಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯಲ್ಲಿ ಆರೋಪಿ ರಾಜು ಗಂಭೀರವಾಗಿ ಗಾಯಗೊಂಡಿದ್ದು ಈತನನ್ನೂ ಸೇರಿದಂತೆ ಇನ್ನಿತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.