ದಾಂತೇವಾಡ (ಪಿಟಿಐ): ನಕ್ಸಲ್ ಪೀಡಿತ ಪ್ರದೇಶಕ್ಕೆ ಮೂರು ದಶಕಗಳ ಬಳಿಕ ಭೇಟಿ ನೀಡಿರುವ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಶಸ್ತ್ರ ತ್ಯಜಿಸಿ ಶಾಂತಿ ಕಾಪಾಡಲು ಮುಂದಾಗುವಂತೆ ನಕ್ಸಲರಿಗೆ ಕರೆ ನೀಡಿದ್ದಾರೆ.
ಬಸ್ತರ್ ಪ್ರಾಂತ್ಯದಲ್ಲಿ ₹ 24 ಸಾವಿರ ಕೋಟಿ ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿದ ಮೋದಿ, ನಕ್ಸಲರು ಹಿಂಸೆಯ ಮಾರ್ಗ ಬಿಟ್ಟು ಅಭಿವೃದ್ಧಿ ಹಾದಿಗೆ ಬರಬೇಕೆಂದು ಹೇಳಿದ್ದಾರೆ.
‘ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯವೇ ಹೊರತು ಬಂದೂಕಿನಿಂದಲ್ಲ. ಪರಿಶ್ರಮದಿಂದ ಯಾರು ಬೇಕಾದರೂ ಮುಖ್ಯ ವಾಹಿನಿಗೆ ಬರಬಹುದು. ಇನ್ನು ಹಿಂಸೆಗೆ ಭವಿಷ್ಯವಿಲ್ಲ, ಶಾಂತಿಯುತ ಅಭಿವೃದ್ಧಿಗೆ ಮಾತ್ರ ಕಾಲ’ ಎಂದು ಅವರು ತಿಳಿಸಿದ್ದಾರೆ.
‘ನಕ್ಸಲ್ ಹೋರಾಟದ ಜನ್ಮಭೂಮಿಯಾದ ನಕ್ಸಲ್ಬಾರಿಯಲ್ಲೇ ಹಿಂಸೆ ಕೊನೆಗೊಂಡಿದೆ. ಹೃದಯಹೀನರಾಗಿ ಬಾಳುವುದನ್ನು ಬಿಡಿ, ಹಿಂಸಾಚಾರ ಇಲ್ಲಿಗೆ ಕೊನೆಯಾಗಲಿ’ ಎಂದು ಮೋದಿ ಹೇಳಿದ್ದಾರೆ.
‘ಕೆಲ ದಿನಗಳ ಮಟ್ಟಿಗೆ ಬಂದೂಕನ್ನು ಕೆಳಗಿಳಿಸಿ ಹಿಂಸೆಯಿಂದ ತೊಂದರೆಗೊಳಗಾದ ಕುಟುಂಬಗಳನ್ನು ಭೇಟಿಯಾಗಿ. ಈ ಪ್ರಯೋಗ ನಿಮ್ಮ ಹೃದಯದಲ್ಲಿ ಬದಲಾವಣೆ ತರುತ್ತದೆ. ನೀವು ಕ್ರಮೇಣ ಹಿಂಸೆಯನ್ನು ತ್ಯಜಿಸುತ್ತೀರಿ’ ಎಂದು ನಕ್ಸಲರನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ.