ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಹೊಂದಾಣಿಕೆಯನ್ನು ವಿರೋಧಿಸಿದ್ದ ವಿವಾದಾತ್ಮಕ ಆರ್ ಜೆ ಡಿ ಲೋಕಸಭಾ ಸದಸ್ಯ ಪಪ್ಪು ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವರು ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ಊಹಿಸಲಾಗಿದೆ.
“ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಪ್ಪು ಯಾದವ್ ಅವರನ್ನು ಆರು ವರ್ಷದವರೆಗೆ ಉಚ್ಛಾಟಿಸಲಾಗಿದೆ” ಎಂದು ಆರ್ ಜೆ ಡಿ ಪ್ರಧಾನ ಕಾರ್ಯದರ್ಶಿ ರಾಮದೇವೊ ಭಂಡಾರಿ ತಿಳಿಸಿದ್ದಾರೆ.
ಐದು ಬಾರಿಗೆ ಲೋಕಸಭಾ ಸದಸ್ಯರಾಗಿರುವ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕಳೆದ ಲೋಕಸಭಾ ಚುನಾವಣೆಗಳಲ್ಲಿ ಜೆ ಡಿ ಯು ಪಕ್ಷದ ಶರದ್ ಯಾದವ್ ಅವರನ್ನು ಮಾಧೆಪುರ ಕ್ಷೇತ್ರದಿಂದ ಸೋಲಿಸಿದ್ದರು ಹಾಗು ಜನತಾ ಪರಿವಾರದ ವಿಲೀನವನ್ನು ವಿರೋಧಿಸಿ ಲಾಲು ಪ್ರಸಾದ್ ಯಾದವ್ ಅವರನ್ನು ದೂಷಿಸುತ್ತಿದ್ದರು. ಹಾಗೆಯೇ ಲಾಲು ಅವರ ಮಗ ಆರ್ ಜೆ ಡಿ ಪಕ್ಷವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಬಲವಾಗಿ ವಿರೋಧಿಸಿದ್ದರು.
ಇವರು ಲೋಕಸಭೆಯಲ್ಲಿ ಆರ್ ಜೆ ಡಿ ಪಕ್ಷದಿಂದ ಆಯ್ಕೆಯಾದ ನಾಲ್ವರು ಸದಸ್ಯರಲ್ಲಿ ಒಬ್ಬರು ಹಾಗು ಇವರ ಪತ್ನಿ ರಂಜಿತ್ ರಂಜನ್ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಗೆದ್ದಿದ್ದಾರೆ.