ಮೋದಿ ಪ್ರಧಾನಿಯಾಗುತ್ತಿದ್ದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೆರೆಯಾಗಬಹುದು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ದಾವೂದ್ ಎಲ್ಲಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ ಆತನ ಬಗೆಗೆ ಯಾವುದೇ ಸುಳಿವೂ ದೊರೆತಿಲ್ಲ ಎನ್ನುವ ಮೂಲಕ ಕೇಂದ್ರ ಸರ್ಕಾರ ಯೂ ಟರ್ನ್ ಹೊಡೆದಿದೆ.
ಮಂಗಳವಾರ ಬಿಜೆಪಿ ಸಂಸದ ನಿತ್ಯಾನಂದ ರಾಯ್ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಕೇಳಿದ್ದ ಪ್ರಶ್ನೆಗೆ ಗೃಹಖಾತೆಯ ರಾಜ್ಯ ಸಚಿವ ಹರಿಭಾಯ್ ಚೌಧುರಿ ಅವರು ಉತ್ತರಿಸಿ ದಾವೂದ್ ಇಬ್ರಾಹಿಂ ಯಾವ ಸ್ಥಳದಲ್ಲಿ ಇದ್ದಾನೆ ಎಂಬುದು ತಿಳಿದಿಲ್ಲ. ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬುದು ಒಂದು ಬಾರಿ ತಿಳಿದರೆ ಆತನ ಹಸ್ತಾಂತರದ ಮಾತುಕತೆ ಪ್ರಕ್ರಿಯೆ ಆರಂಭಿಸಬಹುದು ಎಂದು ತಿಳಿಸಿದರು.
ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನ ಹೆಸರಿದೆ. ಅಲ್ಲದೇ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ಐಎಸ್ ಐ ರಕ್ಷಣೆಯಲ್ಲಿ ಇದ್ದಾನೆಂಬುದು ಎಲ್ಲರಿಗೂ ತಿಳಿದಿದ್ದು ಕೇಂದ್ರ ಕೂಡಾ ಈ ಹಿಂದೆ ದಾವೂದ್ ಪಾಕ್ ನಲ್ಲೇ ಇದ್ದಾನೆ ಎಂದು ಹೇಳಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವೇ ದಾವೂದ್ ಎಲ್ಲಿದ್ದಾನೆ ಎಂಬುದೇ ಗೊತ್ತಿಲ್ಲ ಎನ್ನುವ ಮೂಲಕ ಭಯೋತ್ಪಾದನೆ ವಿಷಯದಲ್ಲಿ ಮೃದು ಧೋರಣೆ ತಳೆದಂತೆ ಕಂಡುಬರುತ್ತಿದೆ.