ತಮಿಳುನಾಡು: ಪ್ರತಿಭಾವಂತ 11 ವರ್ಷದ ಅಂಧ ಬಾಲಕನೊಬ್ಬ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸುದ್ದಿ ವಾಹಿನಿಯೊಂದರಲ್ಲಿ ವಾರ್ತಾ ವಾಚಕನಾಗಿ ಕೆಲಸ ಆರಂಭಿಸಿದ್ದು, ಜಗತ್ತಿನಲ್ಲಿಯೇ ಪ್ರಥಮವಾಗಿ ಲೋಟಸ್ ನ್ಯೂಸ್ ವಾಹಿನಿ ಈ ಮಹತ್ವದ ಕಾರ್ಯ ಮಾಡಿದೆ.
ಹುಟ್ಟುವಾಗಲೇ ಅಂಧತ್ವದಿಂದ ಬಳಲುತ್ತಿದ್ದ ತಮಿಳುನಾಡಿನ ಪಳನಿಯವರಾದ 11 ವರ್ಷದ ಶ್ರೀರಾಮಾನುಜನ್ ಎಂಬ ಬಾಲಕ ಬ್ರೈಲ್ ಲಿಪಿ ಸಹಾಯದಿಂದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸತತ 22 ನಿಮಿಷಗಳ ಕಾಲ ನಿರರ್ಗಳವಾಗಿ ವಾರ್ತೆ ವಾಚನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೇಪಾಳದ ಭೂಕಂಪ, ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದಾ ರಾಜಪಕ್ಸೆಯವರ ಕುರಿತ ಪ್ರಸಕ್ತ ವಿದ್ಯಾಮಾನಗಳ ವಿಶ್ಲೇಷಣೆಯನ್ನೂ ಶ್ರೀರಾಮಾನುಜನ್ ಮಾಡಿದ್ದಾರೆ. ಶ್ರೀರಾಮಾನುಜನ್ ಸದ್ಯ ವಾರಕ್ಕೊಮ್ಮೆ ವಾರ್ತೆ ವಾಚನ ಮಾಡಲಿದ್ದು, ಮುಂದೆ ಪ್ರತಿ ನಿತ್ಯ ಇದನ್ನು ಮುಂದುವರೆಸಲಿದ್ದಾರೆಂದು ಲೋಟಸ್ ನ್ಯೂಸ್ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
-ವೆಬ್ ದುನಿಯಾ