ನವದೆಹಲಿ,ಏ.22- ದೇಶದಲ್ಲಿ ಆಸಿಡ್ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಆಸಿಡ್ ಮಾರಾಟದ ಪರಿಣಾಮಕಾರಿ ನಿಯಂತ್ರಣದ ಸಲುವಾಗಿ ಗೃಹ ಸಚಿವಾಲಯ ಸಾಫ್ಟ್ವೇರ್ವೊಂದನ್ನು ರೂಪಿಸುತ್ತಿದೆ ಎಂದು ಕೇಂದ್ರಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. 2014ರಲ್ಲಿ 310 ಆಸಿಡ್ ದಾಳಿ ಪ್ರಕರಣಗಳು ನಡೆದಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ಆನ್ಲೈನ್ ಮೂಲಕವೇ ಆಸಿಡ್ ಖರೀದಿಸುವಂತೆ ನಿಯಂತ್ರಿಸಲು ಸಾಫ್ಟ್ವೇರ್ ಸಿದ್ಧವಾಗುತ್ತಿದ್ದು, ಎಲ್ಲ ರಾಜ್ಯಗಳೂ ಇದನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಿದ ಅವರು,
ಈ ಕುರಿತಾದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ. 2014ರಲ್ಲಿ ದೇಶಾದ್ಯಂತ ನಡೆದಿರುವ 310 ಆಸಿಡ್ ಪ್ರಕರಣಗಳ ಪೈಕಿ 186 ದಾಳಿ ಪ್ರಕರಣಗಳು ಉತ್ತರ ಪ್ರದೇಶವೊಂದರಲ್ಲೇ ನಡೆದಿದ್ದು,ಮಧ್ಯಪ್ರದೇಶದಲ್ಲಿ 53 ಘಟನೆಗಳು ನಡೆದಿವೆ. ದೆಹಲಿಯಲ್ಲಿ 27 ಪ್ರಕರಣಗಳು ನಡೆದಿದ್ದು, ದೇಶಾದ್ಯಂತ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 208 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
18 ವರ್ಷ ಮೇಲ್ಪಟ್ಟವರಷ್ಟೇ ಆಸಿಡ್ ಖರೀದಿ ಮಾಡಬಹುದು. ಮಾರಾಟ ಮಾಡಿದವರು ಈಗ್ಗೆ ವಿವರ ದಾಖಲಿಸಬೇಕು. ಆಸಿಡ್ ದಾಳಿಗೆ ಗುರಿಯಾದವರ ಚಿಕಿತ್ಸೆಗೆ ನಿರಾಕರಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಕನಿಷ್ಠ ಅಂಥವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ಸಚಿವಾಲಯದ ಕಾರ್ಯದರ್ಶಿ ಹರಿಭಾಯ್ ಚೌಧುರಿ ಹೇಳಿದ್ದಾರೆ.