ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿ, ಎಎಪಿ ಖಾಪ್ ಪಂಚಾಯ್ತಿ ಆಗಿದೆ ಎಂದು ಆಪ್ ಉಚ್ಚಾಟಿತ ನಾಯಕ ಪ್ರಶಾಂತ್ ಭೂಷಣ್ ಅವರು ಮಂಗಳವಾರ ಹೇಳಿದ್ದಾರೆ.
ಪಕ್ಷದಿಂದ ತಮ್ಮನ್ನು ಉಚ್ಚಾಟನೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು, ಕೇಜ್ರಿವಾಲ್ ಅವರ ನಿಜ ಬಣ್ಣ ಗುರುತಿಸದೆ ನಾವು ದೊಡ್ಡ ತಪ್ಪು ಮಾಡಿದೆವು ಎಂದು ಹೇಳಿದ್ದಾರೆ.
ಎಎಪಿ ಖಾಪ್ ಪಂಚಾಯತ್ ರೀತಿ ಆಗುತ್ತಿದೆ. ಕೇಜ್ರಿವಾಲ್ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿ ಎಂದು ಭೂಷಣ್ ಮತ್ತು ಯಾದವ್ ಆರೋಪಿಸಿದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತುಪಾಲನಾ ಸಮಿತಿ ಕೈಗೊಂಡ ನಿರ್ಧಾರದಿಂದ ತಮಗೆ ತುಂಬಾ ಬೇಸರವಾಗಿದೆ. ಅಲ್ಲದೆ ನಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದು ಅಚ್ಚರಿ ತಂದಿಲ್ಲ. ಕಳೆದ ಕೆಲವು ದಿನಗಳ ಬೆಳವಣಿಗೆ ಆ ನಿಲುವಿನ ಮುನ್ಸೂಚನೆಯೇ ಆಗಿತ್ತು ಎಂದು ಯಾದವ್ ಮತ್ತು ಭೂಷಣ್ ಹೇಳಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಬಂಡೆದಿದ್ದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಸೇರಿದಂತೆ ನಾಲ್ವರು ನಾಯಕರನ್ನು ಆಮ್ ಆದ್ಮಿ ಪಕ್ಷದ ಸೋಮವಾರ ರಾತ್ರಿ ಉಚ್ಚಾಟಿಸಿತ್ತು.