ಪತ್ನಿಯ ಶೀಲದ ಶಂಕೆಯಿಂದ ಆಕೆಯನ್ನು ಹತ್ಯೆ ಮಾಡಿದ ಎಷ್ಟೋ ಘಟನೆ ಬಗೆಗೆ ಕೇಳಿದ್ದೀರಿ. ಆದರೆ ಇಲ್ಲೊಬ್ಬಳು ಸತಿ ಸಾವಿತ್ರಿ ತನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಅನುಮಾನದಲ್ಲಿ ಪತಿಯನ್ನೇ ಹತ್ಯೆ ಮಾಡಿ ಜೈಲು ಪಾಲಾಗಿದ್ದಾಳೆ.
ಹೌದು. ಹರಿದ್ವಾರದಲ್ಲಿ ಈ ಘಟನೆ ನಡೆದಿದ್ದು ಹಲವು ದಿನಗಳಿಂದ ರಿಚ್ಪಾಲ್ ಎಂಬ ಈ ಪತ್ನಿಗೆ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಅನುಮಾನ ಕಾಡುತ್ತಿತ್ತು. ಅಲ್ಲದೇ ಈ ವಿಷಯವಾಗಿ ಹಲವಾರು ಬಾರಿ ಜಗಳವನ್ನೂ ಮಾಡಿದ್ದಳು ಎನ್ನಲಾಗಿದೆ. ಆದರೆ ಇತ್ತೀಚೆಗೆ ಆಕೆಯ ಅನುಮಾನ ಮತ್ತಷ್ಟು ಬಲವಾಗಿದ್ದು ತನ್ನ ಅತ್ತಿಗೆಯ ಸಹಾಯವನ್ನು ಪಡೆದು ಗಂಡನನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಅಲ್ಲದೇ ಈ ಕೊಲೆಯನ್ನು ದರೋಡೆಯಿಂದಾದ ಕೃತ್ಯ ಎಂದು ಬಿಂಬಿಸಲು ಪತಿಯ ಕುತ್ತಿಗೆಯಲ್ಲಿದ್ದ ಚೈನ್ ಮತ್ತು ಕೈಯ್ಯಲ್ಲಿದ್ದ ಉಂಗುರವನ್ನು ಎತ್ತಿಕೊಂಡು ತನ್ನ ಪತಿಯನ್ನು ಲೂಟಿ ಮಾಡಿ ಕೊಲೆಗೈಯ್ಯಲಾಗಿದೆ ಎಂದು ದೂರು ನೀಡಿದ್ದಾಳೆ.
ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವೇ ಘಂಟೆಗಳಲ್ಲಿ ಆಕೆಯ ಬಾಯಿಂದ ಸತ್ಯ ಹೊರಗೆಡವಲು ಯಶಸ್ವಿಯಾಗಿದ್ದು ಮೃತನ ಮೈಮೇಲಿದ್ದ ಬಂಗಾರವನ್ನು ಆರೋಪಿಯ ಅತ್ತಿಗೆಯ ಮನೆಯಿಂದ ವಶಪಡಿಸಿಕೊಂಡಿರುವ ಜತೆಗೆ ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.