ತಿರುವನಂತಪುರಂ, ಏ.9- ರೈಲು ಹಳಿ ದಾಟುತ್ತಿದ್ದ ಮಹಿಳೆಯೊಬ್ಬಳು ತಲೆ ಸುತ್ತಿ ಹಳಿಯ ಮೇಲೆ ಕುಸಿಯುತ್ತಾಳೆ. ಅದೇ ವೇಳೆಗೆ ರೈಲೂ ಬರುತ್ತಿದೆ. ಇದನ್ನು ಕಂಡ ಗಾರ್ಡ್ ಒಬ್ಬ ಕೆಂಪು ಬಾವುಟ ತೋರಿಸಿ ರೈಲು ನಿಲ್ಲಿಸುವ ಪ್ರಯತ್ನ ಮಾಡುತ್ತಾನೆ. ಆದರೆ, ಅದು ಉಪಯೋಗವಾಗುವುದಿಲ್ಲ. ಕೊನೆಗೂ ಮಹಿಳೆ ಮೇಲೆ ರೈಲು ಹರಿದು ಹೋಗುತ್ತದೆ. ಆ ನತದೃಷ್ಟಿಯ ದೇಹ ಛಿದ್ರಛಿದ್ರವಾಗುತ್ತದೆ. ಎಂಥವರೂ ಆಘಾತಗೊಳ್ಳುವಂಥ ಸುದ್ದಿ ಇದು. ಆದರೆ, ಇಡೀ ಘಟನೆಯನ್ನು ನೋಡುತ್ತ ನಿಂತಿದ್ದ ಯುವಕರಿಬ್ಬರು, ಆ ಮಹಿಳೆಯನ್ನು ರಕ್ಷಿಸುವ ಬದಲು,
ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಆ ಬಡ ಮಹಿಳೆಯನ್ನು ಉಳಿಸಬಹುದಿತ್ತು. ಇದೇನು ಆ ಯುವಕರ ಮೂರ್ಖತನವೋ, ಅಮಾನವೀಯತೆಯೋ ಅರ್ಥವಾಗಿಲ್ಲ.
ಕೊಟ್ಟಾಯಂನ ಮುತ್ತಾಂಬಾಳಮ್ ನಿಲ್ದಾಣದ ಬಳಿ ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಘಟನೆಯಿದು. ಮೃತ ಮಹಿಳೆ 47 ವರ್ಷದ ಲೈಲಾ ತಾಂಕಾಚನ್ ಎಂದು ಗುರುತಿಸಲಾಗಿದೆ. ಇನ್ನೊಂದು ಘಟನೆ: ಕಲ್ಲಿಕೋಟೆ ರೈಲು ನಿಲ್ದಾಣದ ಬಳಿ 70 ವರ್ಷದ ಕಿವುಡ ವ್ಯಕ್ತಿ ರೈಲು ಬರುವ ಪರಿವೆಯಿಲ್ಲದೆ ಹಳಿ ಮೇಲೆ ಹೋಗುತ್ತಿದ್ದುದನ್ನು ಕಂಡ 64 ವರ್ಷದ ಅಬ್ದುರ್ ರೆಹಮಾನ್ ಎಂಬ ವ್ಯಕ್ತಿ ಅವರನ್ನು ರಕ್ಷಿಸಲು ಹೋಗಿ ತಾನೇ ಬಲಿಯಾದ ಘಟನೆಯೂ ಅದೇ ಕೇರಳದಲ್ಲೇ ನಿನ್ನೆ ಮಧ್ಯಾಹ್ನವೇ ನಡೆದಿದೆ. ಬದುಕುಳಿದ ಕಿವುಡ ವ್ಯಕ್ತಿಯನ್ನು 70 ವರ್ಷದ ರಾಮನ್ ಎಂದು ಹೇಳಲಾಗಿದೆ. ಇವೆರಡೂ ನಿನ್ನೆ ಕೇರಳದಲ್ಲಿ ನಡೆದಿರುವ ಮಾನವೀಯತೆಗೇ ಸವಾಲು ಹಾಕಿರುವ ಘಟನೆಗಳು.