ರಾಂಚಿ: ಹುಸಿ ಬಾಂಬ್ ಕರೆಯಿಂದ, ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ತಡವಾಗಿದ್ದಲ್ಲದೆ, ಭದ್ರತಾ ಪಡೆಗಳಿಗೆ ತಲೆನೋವಾದ ಘಟನೆ ಸೋಮವಾರ ನಡೆದಿದೆ.
ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನಕ್ಕೆ ಸರಿಯಾದ ಸಮಯಕ್ಕೆ ಬರದೆ ತಪ್ಪಿ ಹೋದದ್ದಕ್ಕೆ, ಪ್ರಯಾಣಿಕನೊಬ್ಬ ಈ ಹುಸಿ ಕರೆ ಮಾಡಿದ್ದು ಎಂದು ತಿಳಿದುಬಂದ ನಂತರ ವಿಮಾನ ನಿಲ್ದಾಣದಿಂದ ಬಂಧನಕ್ಕೊಳಗಾಗಿದ್ದಾನೆ.
ಮೂಲಗಳ ಪ್ರಕಾರ ಈ ಪ್ರಯಾಣಿಕ ಈಜು ತರಬೇತುದಾರ. ತಡವಾಗಿ ಬಂದು ಪ್ರಯಾಣ ತಪ್ಪಿಸಿಕೊಂಡದ್ದರಿಂದ ಮುಂಬೈನ ಕಾಲ್ ಸೆಂಟರ್ ಗೆ ಕರೆ ಮಾಡಿ ತಾನು ತೆರಳಬೇಕಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸಂಜೆ ೩ :೦೫ ಘಂಟೆಗೆ ತಿಳಿಸಿದ್ದಾನೆ.
ಆಗಲೇ ಮೇಲಕ್ಕೆ ಹಾರಿದ್ದ ವಿಮಾನವನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಇಳಿಸಿ ಪ್ರತ್ಯೇಕಗೊಳಿಸಿದ್ದಾರೆ. ಕೂಡಲೆ ಕಾರ್ಯಾಚರಣೆಗಿಳಿದ ಭದ್ರತಾ ಸಿಬ್ಬಂದಿ, ತಪಾಸಣೆಯ ನಂತರ ಇದು ಹುಸಿ ಕರೆ ಎಂದು ಧೃಢೀಕರಿಸಿ, ಕರೆಗಳ ತನಿಖೆ ನಡೆಸಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.