ನವದೆಹಲಿ: ತಮ್ಮೆಲ್ಲಾ ಶಕ್ತಿ ಮತ್ತು ಅನುಭವವನ್ನು ಧಾರೆಯೆರೆದರೂ ‘ಮತದಾನದ ರಾಜಕೀಯ ಪರೀಕ್ಷೆ’ಯಲ್ಲಿ ತಾವು ಸೋತಿದ್ದಾಗಿ ಬಿಜೆಪಿಯ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ ಹೇಳಿಕೊಂಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ನಂತರ ಮೊದಲ ಬಾರಿಗೆ ಈ ಕುರಿತು ಮಾತನಾಡಿದ ಬೇಡಿ, ‘ಪರೀಕ್ಷೆಯಲ್ಲಿ ನಾನು ಸೋತಿದ್ದೇನೆ. ನನ್ನ ನಿರ್ಧಾರದ ಬಗ್ಗೆ ಸಂಪೂರ್ಣ ಹೊಣೆ ಹೊರುತ್ತೇನೆ. ಆದರೆ ನನ್ನ ಅಂತರಂಗ ಸೋತಿಲ್ಲ.
ನನಗೆ ಸಿಕ್ಕಿದ ಕಾಲಾವಕಾಶದಲ್ಲಿ ಪೂರ್ಣ ಪ್ರಮಾಣದ ಶ್ರಮ ಮತ್ತು ಶಕ್ತಿ ಹಾಕಿ ಶ್ರಮಿಸಿದ್ದೇನೆ. ಆದರೆ ಸಹಜವಾಗಿಯೇ ಅದು ಸಾಕಾಗಲಿಲ್ಲ. ನಾನೆಂದೂ ಅಪರಾಧಿಪ್ರಜ್ಞೆಯಿಂದ ಸಾಯಲು ಬಯಸುವುದಿಲ್ಲ. ಆದರೂ ಮತದಾನದ ರಾಜಕೀಯದ ಪರೀಕ್ಷೆಯಲ್ಲಿ ನಾನು ಸೋತಿದ್ದೇನೆ’ ಎಂದು ತಮ್ಮ ಅಧಿಕೃತ ಬ್ಲಾಗ್ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ತಕ್ಷಣವೇ ‘ಇದು ನನ್ನ ಸೋಲಲ್ಲ’ ಎಂದು ಪ್ರತಿಕ್ರಿಯಿಸಿದ್ದ ಬೇಡಿ ಇದೇ ಮೊದಲ ಬಾರಿಗೆ ತಾವು ಸೋತಿರುವುದಾಗಿ ಹೇಳಿಕೊಂಡಿದ್ದಾರೆ.