ಶ್ರೀನಗರ, ಜ.17: ಭಾರತೀಯ ಸೇನಾಪಡೆಯ ಕಟ್ಟುನಿಟ್ಟಿನ ದಿಟ್ಟ ಉತ್ತರದ ಹೊರತಾಗಿಯೂ ತಮ್ಮ ಕಿರುಕುಳ ಮುಂದುವರಿಸಿರುವ ಪಾಕ್ ಮೂಲದ ಉಗ್ರರು, ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ಇಂದು ಮತ್ತೆ ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್ ಮೃತಪಟ್ಟಿದ್ದು, ನಾಗರಿಕನೊಬ್ಬ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕುಲ್ಗಾಂವ್ ಜಿಲ್ಲೆಯ ಹೋಮ್ ಶಾಲಿಬಾಗ್ ವಿಧಾನಸಭಾ ಕ್ಷೇತ್ರದಲ್ಲಿ ಜಾಹೂದ್ ಅಹ್ಮದ್ದಾರ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ದಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ತೆರಳುವ ವೇಳೆಗೆ ದಾರ್ ಕೊನೆಯುಸಿರೆಳೆದರು.
ಗಾಯಾಳು ನಾಗರಿಕ ಜಾಹೂರ್ ಅಹ್ಮದ್ ಇಲಾಹಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ತವ್ಯದಲ್ಲಿದ್ದ ದಾರ್ ತಮ್ಮ ಕೆಲಸಕ್ಕಾಗಿ ಇಲಾಹಿ ಅವರ ಬೈಕ್ನಲ್ಲಿ ತೆರಳುತ್ತಿದ್ದರು. ಭದ್ರತಾ ಸಿಬ್ಬಂದಿ ಪ್ರದೇಶ ಸುತ್ತುವರಿದಿದ್ದು, ಉಗ್ರನಿಗಾಗಿ ಶೋಧಕಾರ್ಯ ನಡೆದಿದೆ.