ರಾಂಪುರ (ಉತ್ತರಪ್ರದೇಶ): 2009ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಗೆ ಬುಧವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ನಕ್ವಿ ಅವರಿಗೆ ನಂತರ ಜಾಮೀನು ಕೂಡ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಿತರ ೧೮ ಮಂದಿ ತಪ್ಪಿತಸ್ಥರೆಂದು ಸಾಬೀತಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೪೩ (ಅಕ್ರಮವಾಗಿ ಗುಂಪು ಸೇರುವಿಕೆ), ೩೪೧ (ಅಕ್ರಮವಾಗಿ ಪ್ರತಿರೋಧ ಒಡ್ಡುವುದು), ೩೪೨ (ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳುವುದು) ಹಾಗೂ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ ೭ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೪೪ರ ಅಡಿಯಲ್ಲಿ ನಕ್ವಿ ಅವರು ತಪ್ಪಿತಸ್ಥರು ಎಂದು ನ್ಯಾಯಾಧೀಶ ಮನೀಶ್ ಕುಮಾರ್ ಹೇಳಿದರು.
ಏನಿದು ಪ್ರಕರಣ: ೨೦೦೯ರ ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನಡೆದ ಘಟನೆ ಇದು. ರಾಂಪುರ ಬಿಜೆಪಿ ಮುಖ್ಯಸ್ಥರನ್ನು ಬಂಧಿಸಿ ಪಕ್ಷದ ವಾಹನವನ್ನು ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ನಕ್ವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಂಪುರ ಕ್ಷೇತ್ರ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಪ್ರದೇಶದಲ್ಲಿ ಧರಣಿ ನಡೆಸಿದ್ದರು. ಆಗ ಪ್ರತಿಭಟನಾನಿರತರು ನಿಷೇಧಾಜ್ಞೆ ಉಲ್ಲಂಘಿಸಿ ಪೊಲೀಸ್ ಠಾಣೆಗೆ ನುಗ್ಗಿದ್ದರು.
ಈ ಪ್ರಕರಣದಲ್ಲಿ ನಕ್ವಿ ಸೇರಿದಂತೆ ೨೦೦ ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕೋರ್ಟ್ ನೀಡಿದ ಆದೇಶಕ್ಕೆ ಪ್ರತಿಕ್ರಿಯಿಸಿರುವ
ನಕ್ವಿ ಅವರು, ತಾವು ನ್ಯಾಯಾಂಗವನ್ನು ಗೌರವಿಸುವುದಾಗಿ ಹೇಳಿದ್ದಾರೆ. ‘ನಾವು ಆದೇಶದಲ್ಲಿ ಏನಿದೆ ಎಂದು ತಿಳಿದುಕೊಂಡು ಕಾನೂನು ಮೊರೆ ಹೋಗುತ್ತೇವೆ’ ಎಂದು ಜಾಮೀನು ಪಡೆದ ಬಳಿಕ ನಕ್ವಿ ಪ್ರತಿಕ್ರಿಯಿಸಿದ್ದಾರೆ.