ನವದೆಹಲಿ: ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಅಂಚೆ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲು ಚುನಾವಣಾ ಆಯೋಗ ಮಾಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಈ ಸಲಹೆ ಅನುಷ್ಠಾನ ಕುರಿತಂತೆ 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
‘ಎನ್ಆರ್ಐ’ಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬೇಕು ಎಂಬ ಆಯೋಗದ ಸಲಹೆಯನ್ನು ಯಥಾವತ್ತಾಗಿ ಒಪ್ಪಿಕೊಳ್ಳಲಾಗಿದೆ. ಇದನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
‘ಆಯೋಗದ ಸಲಹೆಯನ್ನು ಸರ್ಕಾರ ಒಪ್ಪಿರುವುದರಿಂದ ಅದರ ಅನುಷ್ಠಾನಕ್ಕೆ ಶೀಘ್ರ ಮುಂದಾಗಬೇಕು. ಈ ಪ್ರಕ್ರಿಯೆ ಬಗ್ಗೆ ಮುಂದಿನ ವಿಚಾರಣೆಯಲ್ಲಿ ವೇಳೆ ವರದಿ ನೀಡಬೇಕು’ ಎಂದು ಹೇಳಿದ ಮುಖ್ಯನ್ಯಾಯಮೂರ್ತಿ ಎಚ್. ಎಲ್. ದತ್ತು ಮತ್ತು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಪೀಠ, ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿತು.
ಕೇಂದ್ರದ ನಿಲುವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಲ್. ನರಸಿಂಹ, ಚುನಾವಣಾ ಆಯೋಗದ ಸಲಹೆಯನ್ನು ಆಧರಿಸಿ ಸೂಕ್ತ ತಿದ್ದುಪಡಿ ತರಲು ಕಾನೂನು ಸಚಿವಾಲಯ ಕಾರ್ಯೋನ್ಮುಖವಾಗಿದೆ ಎಂದರು.
ಎನ್ಆರ್ಐಗಳು ವಾಸಿಸುತ್ತಿರುವ ಸ್ಥಳದಿಂದಲೇ ಮತಚಲಾಯಿಸಲು ಅವಕಾಶ ಕಲ್ಪಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿತ್ತು. ಈ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗಕ್ಕೆ ಕೋರ್ಟ್ ನಿರ್ದೇಶಿಸಿತ್ತು. ಆಯೋಗ ವರದಿ ಸಲ್ಲಿಸಿದ ನಂತರ, ಈ ಬಗ್ಗೆ ನಾಲ್ಕು ವಾರಗಳಲ್ಲಿ ನಿಲುವು ಸ್ಪಷ್ಟಪಡಿಸುವಂತೆ ಕೋರ್ಟ್ ಕಳೆದ ನ.14ರಂದು ಕೇಂದ್ರಕ್ಕೆ ಸೂಚಿಸಿತ್ತು.
ಮತದಾನ ವಿಧಾನ: ಎನ್ಆರ್ಐಗಳಿಗೆ ಆನ್ಲೈನ್ (ಇಂಟರ್ನೆಟ್) ಮೂಲಕ ಮತಪತ್ರ ಕಳುಹಿಸಿಕೊಡಬೇಕು. ಮತ ಚಲಾಯಿಸಿದ ನಂತರ ಮತಪತ್ರವನ್ನು ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗೆ ಅಂಚೆ ಮೂಲಕ ಕಳುಹಿಸಿಕೊಡುವ ಪದ್ಧತಿ ಜಾರಿಗೊಳಿಸಬಹುದು ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿತ್ತು.
ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಆ ರಾಷ್ಟ್ರದ ಪೌರತ್ವ ಪಡೆಯದೇ ಇದ್ದ ಪಕ್ಷದಲ್ಲಿ ಭಾರತದ ತಮ್ಮೂರಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶವಿದೆ. ಚುನಾವಣೆ ಸಮಯದಲ್ಲಿ ಅವರು ಖುದ್ದು ಹಾಜರಾಗಿ ಮತಚಲಾಯಿಸಬಹುದು.