ನವದೆಹಲಿ: ಜವಾಹರಲಾಲ್ ನೆಹರು, ಡಾ.ರಾಜೇಂದ್ರ ಪ್ರಸಾದ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇವರೆಲ್ಲರಿಗೂ ಇರುವ ಸಾಮ್ಯತೆ ಏನು? ಅವರೆಲ್ಲರೂ ರಾಜಕಾರಣಿಗಳು ಎಂದು ಸುಲಭವಾಗಿ ಹೇಳಬಹುದು. ಆದರೆ ರಾಜಕಾರಣ ಹೊರತಾಗಿ ಇನ್ನೊಂದು ಸಾಮ್ಯತೆ ಇದೆ. ಇವರೆಲ್ಲರೂ ಪಾನ್ ತಿಂದಿರುವುದು ದೆಹಲಿ ಒಂದು ಅಂಗಡಿಯಿಂದ.
ಹೌದು. ದೇಶದಲ್ಲಿರುವ ಪ್ರಧಾನಿಗಳಿಗೆ, ಪ್ರಮುಖ ರಾಜಕಾರಣಿಗಳಿಗೆ ಮತ್ತು ದೇಶಕ್ಕೆ ಅತಿಥಿಯಾಗಿ ಬರುವ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಪಾನ್ ತಯಾರಿಸಿ ಕೊಡುವ ವ್ಯಕ್ತಿ 95 ವರ್ಷದ ನಾರಾಯಣ ಪಾಂಡೆ.
ರಾಷ್ಟ್ರಪತಿ ಭವನಕ್ಕೆ ಪ್ರತಿದಿನ 10-12 ಸ್ವೀಟ್ ಪಾನ್ ಗಳನ್ನು ತಯಾರಿಸಿ ಕೊಡುವ ನಾರಾಯಣ ಪಾಂಡೆಗೆ ವಿಶೇಷ ಸಂದರ್ಭದಲ್ಲಿ 500 ಪಾನ್ಗಳನ್ನು ತಯಾರಿಸಿ ಕೊಡಲು ಬೇಡಿಕೆ ಬರುತ್ತಂತೆ. 1943ರಲ್ಲಿ ನಾರಾಯಣ ಪಾಂಡೆ ದೆಹಲಿಯ ಕಾನ್ಹಾಟ್ ಪ್ರದೇಶದಲ್ಲಿ ತನ್ನ ಅಂಗಡಿಯನ್ನು ತೆರೆದಿದ್ದು, 1970ರಲ್ಲಿ ರಾಷ್ಟ್ರಪತಿ ವಿವಿ ಗಿರಿ ದಕ್ಷಿಣ ಬ್ಲಾಕ್ನ ನಾರ್ಥ್ ಅವೆನ್ಯೂನಲ್ಲಿ ಮತ್ತೊಂದು ಅಂಗಡಿ ತೆರೆಯಲು ಅನುಮತಿ ನೀಡಿದ್ದರಂತೆ.
ವಿಶೇಷ ಏನೆಂದರೆ ರಾಜೇಂದ್ರ ಪ್ರಸಾದ್ ರಿಂದ ಪ್ರಣಬ್ ಮುಖರ್ಜಿ ವರೆಗಿನ ರಾಷ್ಟ್ರಪತಿಗಳು, ಜವಾಹರಲಾಲ್ ನೆಹರು ರಿಂದ ಈಗಿನ ನರೇಂದ್ರ ಮೋದಿವರೆಗಿನ ಎಲ್ಲ ಪ್ರಧಾನಿಗಳ ಜೊತೆ ಇವರು ಫೋಟೋ ತೆಗೆದಿದ್ದು ಈ ಫೋಟೋವನ್ನು ತಮ್ಮ ಅಂಗಡಿಯ ಗೋಡೆಯಲ್ಲಿ ಪ್ರಕಟಿಸಿದ್ದಾರೆ.
ಈಗ ಪಾನ್ ಶಾಪ್ನ್ನು ನಾರಾಯಣ ಪಾಂಡೆಯವರ ಮಗ ಮತ್ತು ಮೊಮ್ಮಗ ನೋಡಿಕೊಳ್ಳುತ್ತಿದ್ದು, ರಾಜಕಾರಣಿಗಳು ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳು ಇವರ ಪಾನ್ ಗ್ರಾಹಕರಾಗಿದ್ದಾರೆ.