ಇಂದೋರ್: ನಾವು ಎಷ್ಟೇ ಮುಂದುವರಿದರೂ ಸಮಾಜದಲ್ಲಿ ಅನಾಗರಿಕತೆ ಇನ್ನೂ ಹೋಗಿಲ್ಲ ಎಂಬುದಕ್ಕೆ ಜ್ವಲಂತ ಸಾಕ್ಷಿ ಈ ಘಟನೆ. ಮಧ್ಯಪ್ರದೇಶದ ಇಂದೋರ್ನ ಅಲಿರಾಜ್ಪುರದಲ್ಲಿ ಯುವಕನೊಬ್ಬನ ಜೊತೆ ಮಹಿಳೆ ಪರಾರಿಯಾಗಿದ್ದಳು. ಇದಕ್ಕೆ ಶಿಕ್ಷೆಯಾಗಿ ಅದೇ ಯುವಕನಿಗೆ ಸಾರ್ವಜನಿಕವಾಗಿ ಎದೆ ಹಾಲುಣಿಸಬೇಕು ಎಂಬ ಶಿಕ್ಷೆಯನ್ನು ಬುಡಕಟ್ಟು ಜನಾಂಗದ ಪಂಚಾಯತ್ನಲ್ಲಿ ನಿರ್ಣಯಿಸಿ ಶಿಕ್ಷೆಯನ್ನು ಜಾರಿಗೊಳಿಸಿದ್ದಾರೆ.
ಯುವಕ ಜೊತೆ ಪರಾರಿಯಾಗಿದ್ದ ಮಹಿಳೆಗೆ ಶಿಕ್ಷೆ ನೀಡಬೇಕು ಎಂಬ ಕಾರಣಕ್ಕೆ ಈ ಶಿಕ್ಷೆ ನೀಡಲು ಪಂಚಾಯತ್ನಲ್ಲಿ ನಿರ್ಧಾರ ಕೈಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರ ಬಂಧನ: ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಭಿಲ್ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ 25 ವರ್ಷದ ಮಹಿಳೆ ಹಾಗೂ 21 ವರ್ಷದ ಯುವಕನಿಗೆ ಡಿಸೆಂಬರ್ 31ರಂದು ದೌರ್ಜನ್ಯ ಮಾಡಿದ್ದಕ್ಕಾಗಿ ಬಂಧಿಸಿದ್ದೇವೆ ಅಂತಾ ಅಲಿರಾಜ್ಪುರ್ ಜಿಲ್ಲಾ ಎಸ್ಪಿ ಅಖಿಲೇಶ್ ಝಾ ಹೇಳಿದ್ದಾರೆ.
ಪರಾರಿಯಾಗಿದ್ದವಳು ಮೂರು ಮಕ್ಕಳ ತಾಯಿ: ಪ್ರಾಥಮಿಕ ತನಿಖೆ ವೇಳೆ, 2 ತಿಂಗಳ ಹಿಂದೆ ಈ ಮಹಿಳೆ ತನ್ನ ಮೂವರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಯುವಕನ ಜೊತೆ ಪರಾರಿಯಾಗಿದ್ದಳು ಎಂದು ತಿಳಿದು ಬಂದಿದೆ. ಅದರೆ ಬಳಿಕ ಇವರಿಬ್ಬರೂ ಗುಜರಾತ್ನಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ಅಲ್ಲಿಂದ ಗ್ರಾಮಕ್ಕೆ ಕರೆತರಲಾಗಿತ್ತು.
ಎದೆ ಹಾಲುಣಿಸಿದರೆ ಆತ ನಿನ್ನ ಮಗುವಿನಂತೆ: ಈ ವೇಳೆ ಪಂಚಾಯತ್ ಸಭೆ ಸೇರಿ ಮಹಿಳೆಯ ಕೂದಲನ್ನು ಕತ್ತರಿಸಿದ್ದಾರೆ. ಬಳಿಕ ಮಹಿಳೆಗೆ ಜೊತೆಯಲ್ಲಿ ಪರಾರಿಯಾದ ಯುವಕನಿಗೆ ಎದೆ ಹಾಲುಣಿಸಲು ಹೇಳಿದ್ದಾರೆ. ಬಳಿಕ ಆಕೆಗೆ ಎದೆ ಹಾಲು ನೀಡಿದ ನಂತರ ಯುವಕನನ್ನು ಮಗು ಎಂದು ಪರಿಗಣಿಸಬೇಕು ಎಂದು ಆದೇಶ ನೀಡಿದೆ. ಈ ಘಟನೆ ವೇಳೆ 40 ಮಂದಿ ಭಾಗಿಯಾಗಿದ್ದರು. ಇವರಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿರುವುದಾಗಿ ಅಖಿಲೇಶ್ ಝಾ ಹೇಳಿದ್ದಾರೆ.