ಹೈದರಾಬಾದ್: ವೈಕುಂಠ ಏಕಾದಶಿ ಹಾಗೂ ಇಂಗ್ಲಿಷ್ ಹೊಸ ಕ್ಯಾಲೆಂಡರ್ ವರ್ಷ ಒಂದೇ ದಿನ ಬಂದಿರುವುದರಿಂದ ತಿಮ್ಮಪ್ಪನ ದರ್ಶನಕ್ಕೆ ತಿರುಮಲದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದಾರೆ.
ಈ ಪೈಕಿ ಹೆಚ್ಚೆಂದರೆ ೭೫ ಸಾವಿರ ಭಕ್ತರು ಹಾಗೂ ೩ ಸಾವಿರ ಗಣ್ಯರಿಗೆ ಮಾತ್ರ ಗುರುವಾರ ಉತ್ತರ ದ್ವಾರದಲ್ಲಿ ದರ್ಶನ ದೊರೆಯಲಿದೆ. ಉಳಿದವರು ಜನವರಿ ೨ರಂದು ದ್ವಾದಶಿಯ ದಿನ ದರ್ಶನ ಪಡೆಯಲಿದ್ದಾರೆ. ಸರದಿಯಲ್ಲಿ ಕಾಯುತ್ತಿರುವ ಸಹಸ್ರಾರು ಜನರಿಗೆ ಉಚಿತ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
‘ದಿನವೊಂದಕ್ಕೆ ಗರಿಷ್ಠ ೭೦ ಸಾವಿರ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಬಹುದು.
ಆದರೆ ನೂಕುನುಗ್ಗಲು ಕಡಿಮೆ ಮಾಡುವುದಕ್ಕಾಗಿ ಪ್ರತಿದಿನ ೭೫ ಸಾವಿರ ಜನರಿಗೆ ದರ್ಶನದ ಅವಕಾಶ ನೀಡುತ್ತಿದ್ದೇವೆ’ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಿ.ಸಾಂಬಶಿವ ರಾವ್ ತಿಳಿಸಿದರು.
‘ಬುಧವಾರ ಮಧ್ಯಾಹ್ನದ ಊಟದ ನಂತರ ಜನದಟ್ಟಣೆ ಹೆಚ್ಚಾಯಿತು. ಸಾಮಾನ್ಯ ಭಕ್ತರಿಗೆ ತೊಂದರೆ ಆಗಬಾರದೆಂದು ಅತಿ ಗಣ್ಯರ ದರ್ಶನ ಸಂಖ್ಯೆಯನ್ನು ೩ ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ದ್ವಾದಶಿಯ ದಿನ ಜನಸಾಮಾನ್ಯರಿಗೆ ದರ್ಶನದ ಅವಕಾಶ ಸಾಕಷ್ಟಿರುತ್ತದೆ’ ಎಂದು ಟಿಟಿಡಿ ಜಂಟಿ ಕಾರ್ಯಕಾರಿ ಅಧಿಕಾರಿ ಕೆ.ಎಸ್.ಶ್ರೀನಿವಾಸ ರಾಜು ಹೇಳಿದ್ದಾರೆ.
ದರ್ಶನ ಹಾಗೂ ವಸತಿ ವ್ಯವಸ್ಥೆಯನ್ನು ನೋಡಿಕೊಳ್ಳುವುದಕ್ಕಾಗಿ ಟಿಟಿಡಿ ಈಗಾಗಲೇ ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಎಲ್ಲ 7 ಸಾವಿರ ಕೊಠಡಿಗಳನ್ನು ವಸತಿಗೆ ಸಿದ್ಧಪಡಿಸಲಾಗಿದೆ. ೨೪ ಗಂಟೆ ಮಾತ್ರ ಇಲ್ಲಿ ತಂಗುವುದಕ್ಕೆ ಅವಕಾಶ ಇದೆ. ಆರು ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ.
ಸಿ.ಎಂ ಸೂಚನೆ:ವೈಕುಂಠ ಏಕಾದಶಿ ದರ್ಶನದ ವೇಳೆ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಟಿಟಿಡಿ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ