ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಮುಂದೊಂದು ದಿನ ಈ ದೇಶದ ರಾಷ್ಟ್ರಪತಿಗಳಾಗಲಿದ್ದಾರೆ ಎಂದು ರಾಜಸ್ತಾನದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ತಮ್ಮ ಪತಿಯೊಂದಿಗೆ ಭಾನುವಾರ ರಾಜಸ್ತಾನದ ಭಿಲ್ವಾರಾದ ಗ್ರಾಮವೊಂದಕ್ಕೆ ತೆರಳಿದ್ದ ಸ್ಮೃತಿ ಇರಾನಿ, ಅಲ್ಲಿ ಪಂಡಿತ್ ನತುಲಾಲ್ ವ್ಯಾಸ್ ಎಂಬ ಜ್ಯೋತಿಷಿಯನ್ನು ಭೇಟಿ ಮಾಡಿದ್ದಾರೆ. ಇರಾನಿ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಜೋತಿಷಿಯೊಂದಿಗೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಇದೇ ಜ್ಯೋತಿಷಿ, ಇರಾನಿ ಅವರಿಗೆ ನೀವು ನೀವು ಲೋಕಸಭೆ ಚುನಾವಣೆಯಲ್ಲಿ ಸೋತರೂ ಎನ್ಡಿಎ ಸರ್ಕಾರದಲ್ಲಿ ಸಚಿವರಾಗುತ್ತೀರಿ ಎಂದು ಭವಿಷ್ಯ ನುಡಿದಿದ್ದರಂತೆ. ಜ್ಯೋತಿಷಿಯ ಭವಿಷ್ಯದಂತೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೋತರೂ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಈ ಜ್ಯೋತಿಷಿಯ ಭವಿಷ್ಯದ ಮೇಲೆ ಸ್ಮೃತಿ ಇರಾನಿ ಅವರಿಗೆ ಬಲವಾದ ನಂಬಿಕೆ ಇದ್ದು, ನಿನ್ನೆಯೂ ತಮ್ಮ ರಾಜಕೀಯ ಭವಿಷ್ಯದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು ಮತ್ತು ಸರಿಯಾಗಿ ಭವಿಷ್ಯ ನುಡಿದದ್ದಕ್ಕೆ ಜ್ಯೋತಿಷಿಯನ್ನು ಅಭಿನಂದಿಸಿದರು.
ಇನ್ನು ಈ ಬಗ್ಗೆ ಇಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ‘ನಿಮ್ಮ ಟಿಆರ್ಪಿಗೆ ನನ್ನ ಕೊಡುಗೆಯೂ ಇದೆ ಅಂತ ಅನಿಸುತ್ತಿದೆ ಮತ್ತು ಇದಕ್ಕಾಗಿ ನನಗೆ ಖುಷಿಯಾಗುತ್ತಿದೆ’ ಎಂದರು.
ನನ್ನ ವೈಯಕ್ತಿಕ ಜೀವನ ನಿಮ್ಮ ಮಾಧ್ಯಮದ ಜವಾಬ್ದಾರಿ ಅಡಿಯಲ್ಲಿ ಬರುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಆದರೂ ನೀವು ಅದನ್ನು ಒಂದು ಪ್ರಮುಖ ಸುದ್ದಿಯನ್ನಾಗಿ ಮಾಡಿದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆ ಎಂದರು.
ಈ ಮಧ್ಯೆ ಸ್ಮೃತಿ ಇರಾನಿ ಅವರ ಜ್ಯೋತಿಷಿಯ ಭೇಟಿ ವಿವಾದಕ್ಕೆ ಕಾರಣವಾಗಿದ್ದು, ಒಬ್ಬ ಕೇಂದ್ರ ಸಚಿವರಾಗಿ ಜ್ಯೋತಿಷ್ಯವನ್ನು ನಂಬುವುದು ಎಷ್ಟು ಸರಿ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.