ರಾಷ್ಟ್ರೀಯ

ಸಂತ ರಾಂಪಾಲ್ ಆಪ್ತ ಪುರುಷೋತ್ತಮ ದಾಸ್ ಬಂಧನ

Pinterest LinkedIn Tumblr

Haryana-police

ಚಂಡಿಗಡ್/ಬಿರ್ವಾಲಾ: ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಸಂತ ರಾಂಪಾಲ್ ಆಪ್ತ ಪುರುಷೋತ್ತಮ ದಾಸ್‌ನನ್ನು ಬುಧವಾರ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಬಂಧನ ಭೀತಿ ಎದುರಿಸುತ್ತಿರುವ ಸಂತ ರಾಂಪಾಲ್ ಅವರು ಆಶ್ರಮದಿಂದ ತಲೆ ಮರೆಸಿಕೊಂಡಿದ್ದು, ಅವರ ಪರಮಾಪ್ತನಾಗಿರುವ ಪುರುಷೋತ್ತಮ ದಾಸ್‌ನನ್ನು ಹರಿಯಾಣ ಪೊಲೀಸರು ಹಿಸ್ಸಾರ್ ಆಶ್ರಮದಲ್ಲಿ ಬಂಧಿಸಿದ್ದು ವಿಚಾರಣೆಗೊಳಪಸಿದ್ದಾರೆ.

ಪೊಲೀಸರು ನಡೆಸಿದ ಕಾರ್ಯಾಚರಣೆ ನಿನ್ನೆ ಹಿಂಸಾ ರೂಪಕ್ಕೆ ತಿರುಗಿತ್ತು. ಆದರೆ ಎದೆಗುಂದದ ಪೊಲೀಸರು ಸತತವಾಗಿ ಕಾರ್ಯಾಚರಣೆ ನಡೆಸಿ ಆಶ್ರಮದ ಸುತ್ತ ಜಮಾಯಿಸಿದ್ದ ಅನುಯಾಯಿಗಳನ್ನು ತೆರವುಗೊಳಿಸಿ ಆಶ್ರಮವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪುರುಷೋತ್ತಮ ದಾಸ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ವೇಳೆ ಆತನನ್ನ ಬಂಧಿಸಲಾಗಿದೆ.

ಆಶ್ರಮಮದ ಬಲ ಭಾಗದಲ್ಲಿರುವ ಆವರಣದಲ್ಲಿ ದೊರೆತ ನಾಲ್ಕು ಮೃತ ಮಹಿಳೆಯರ ಶವವನ್ನು ಆಶ್ರಮದ ಸಿಬ್ಬಂದಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಲ್ಲದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 18 ತಿಂಗಳ ಒಂದು ಮಗು ಸೇರಿದಂತೆ ಓರ್ವ ಬಾಲಕಿ ಕೂಡ ಸಾವನ್ನಪ್ಪಿರುವ ಶಂಕೆ ಇದ್ದು, ಈ ವರೆಗೂ  ಅದರ ಬಗೆಗಿನ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.

ಮೃತರನ್ನು ಸಂತೋಷ್, ಮಾಲಕಿತ್, ರಾಜಬಾಲ ಮತ್ತು ಸವಿತಾ ಎಂದು ಗುರುತಿಸಲಾಗಿದೆ. ಆದರೆ ಅವರ ದೇಹದ ಮೇಲೆ ಯಾವುದೇ ರೀತಿಯ ಗುರುತು ಕೂಡ ಪತ್ತೆಯಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಆಶ್ರಮದಲ್ಲಿ ಇನ್ನೂ ಸುಮಾರು 5 ಸಾವಿರ ಬೆಂಬಲಿಗರಿರುವ ಶಂಕೆ ಇದ್ದು, ಅವರೆಲ್ಲರನ್ನೂ ತೆರವುಗೊಳಿಸಲಾಗುತ್ತಿದೆ. ಪ್ರಸ್ತುತ ಸುಮಾರು 35 ಬಸ್ ಗಳಲ್ಲಿ ಬೆಂಬಲಿಗರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹರ್ಯಾಣ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಮಹಿಳೆಯರನ್ನು ಮತ್ತು ಮಕ್ಕಳನ್ನು ತಡೆಗೋಡೆಯಾಗಿ ಬಳಕೆ ಮಾಡುತ್ತಿರುವ ರಾಂಪಾಲ್ಇನ್ನು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧನ ಭೀತಿ ಎದುರಿಸುತ್ತಿರುವ ವಿವಾದಿತ ದೇವಮಾನವ ಬಾಬಾರಾಂಪಾಲ್ ತನ್ನ ಮಹಿಳಾ ಭಕ್ತರನ್ನೇ ತನ್ನ ತಡೆಗೋಡೆಯಾಗಿ ನಿರ್ಮಿಸಿಕೊಂಡಿದ್ದಾನೆ. ಆಶ್ರಮದ ತಡೆಗೋಡೆಯನ್ನು ಹೊಡೆದು ಹಾಕಿದ್ದ ಪೊಲೀಸ ಆಶ್ರಮದಲ್ಲಿ ಶೋಧ ಕಾರ್ಯ ನಡೆಸಿದರಾದರೂ ಅಲ್ಲಿ ಬಾಬಾ ರಾಂಪಾಲ್ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಕೂಡ ಪೊಲೀಸರು ತಮ್ಮ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

Write A Comment