ಬ್ರಿಸ್ಬೇನ್, ಆಸ್ಟೇಲಿಯಾ, (ಪಿಟಿಐ): ಭಯೋತ್ಪಾದನೆ ಹಾಗೂ ಜಾಗತಿಕ ತಾಪಮಾನ ನಿಭಾಯಿಸಲು ಮಹಾತ್ಮಾ ಗಾಂಧಿಜಿ ಅವರ ಸಲಹೆಗಳತ್ತ ಲಕ್ಷ್ಯ ವಹಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿಜೀ ಅವರ ಅಹಿಂಸೆ ಹಾಗೂ ಪ್ರೀತಿ ಬಗೆಗಿನ ಬೋಧನೆಗಳು ಈಗಲೂ ಪ್ರಸ್ತುತ ಎಂದು ಭಾನುವಾರ ಅಭಿಪ್ರಾಯ ಪಟ್ಟರು.
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿರುವ ನಗರದ ರೊಮಾ ಸ್ಟ್ರೀಟ್ ಪಾರ್ಕ್ಲ್ಯಾಂಡ್ನಲ್ಲಿ ಗಾಂಧಿಜೀ ಅವರ 2.5 ಮೀಟರ್ ಎತ್ತರದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಮಹಾತ್ಮಾ ಗಾಂಧಿಜಿ ಅವರು ಆಗಿನಂತೆ ಈಗಲೂ ಪ್ರಸ್ತುತ ಎಂದು ನಾನು ಅಚಲವಾಗಿ ನಂಬುತ್ತೇನೆ. ಅಕ್ಟೋಬರ್ 2ರಂದು (1869) ಪೋರಬಂದರಿನಲ್ಲಿ ಒಬ್ಬ ವ್ಯಕ್ತಿ ಜನಿಸಲಿಲ್ಲ. ಬದಲಾಗಿ ಒಂದು ಯುಗ ಜನ್ಮ ತಳೆಯಿತು’ ಎಂದು ಮೋದಿ ಅವರು ಹೇಳಿದಾಗ ನೆರೆದಿದ್ದ ಭಾರತೀಯರು ಚಪ್ಪಾಳೆ ತಟ್ಟಿ ಅನುಮೋದಿಸಿದರು.
‘ಎರಡು ದೊಡ್ಡ ಸವಾಲುಗಳಾದ ಭಯೋತ್ಪಾದನೆ ಹಾಗೂ ಜಾಗತಿಕ ತಾಪಮಾನ ನಿಭಾಯಿಸಲು ಜಗತ್ತು ಹೋರಾಡುತ್ತಿದೆ. ಇವು ಆತಂಕದ ವಿಷಯಗಳೂ ಆಗಿವೆ. ಒಂದು ವೇಳೆ ನಾವು ಗಾಂಧಿಜೀ ಅವರ ಜೀವನ ಹಾಗೂ ಅವರ ಬೋಧನೆಯತ್ತ ಲಕ್ಷ್ಯ ವಹಿಸಿದರೆ ವಿಶ್ವ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ನಾವು ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.