ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಕಾಂಗ್ರೆಸ್ ವಕ್ತಾರರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಎಐಸಿಸಿ ಶಿಸ್ತು ಸಮಿತಿ ಶಿಫಾರಸಿನ ಮೇರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ವಕ್ತಾರನ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಹಿನ್ನೆಲೆಯಲ್ಲಿ ತರೂರ್ ಅವರು ಪಕ್ಷದೊಳಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ತರೂರ್ ಪದೇ ಪದೇ ಮೋದಿ ಅವರನ್ನು ಹೊಗಳುತ್ತಿದ್ದು, ಪಕ್ಷದ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೇರಳದ ಕಾಂಗ್ರೆಸ್ ಮುಖಂಡರು ಎಐಸಿಸಿಗೆ ದೂರು ಸಲ್ಲಿಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ನಿಮ್ಮ ಗೆಲುವಿಗೆ ಪಕ್ಷದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದಾರೆ ಎಂಬುದನ್ನು ಕೇರಳ ಕಾಂಗ್ರೆಸ್ ತರೂರ್ ಅವರಿಗೆ ನೆನಪಿಸಿದೆ.
ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ವಿಷಪ್ರಾಶನದಿಂದಲೇ ಮೃತಪಟ್ಟಿದ್ದಾರೆ ಎಂಬ ವೈದ್ಯಕೀಯ ವರದಿಗಳ ಹಿನ್ನೆಲೆಯಲ್ಲಿ ತರೂರ್ ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
1 Comment
Olleyavarannu hogalo haaguu illa… namma dEshada paristhiti nODi swaami…