ಗಲ್ಫ್

ಮಸ್ಕತಿನ ಕರ್ನಾಟಕ ಸಂಘದ ರಾಜ್ಯೋತ್ಸವ – ಕರ್ನಾಟಕ ಉತ್ಸವ 2018

Pinterest LinkedIn Tumblr

ಕನ್ನಡ ರಾಜ್ಯೋತ್ಸವ ಎಲ್ಲ ಕನ್ನಡಿಗರಿಗೂ ಒಂದು ಸಂತಸದ ಸಂದರ್ಭ. ತಮ್ಮ ದೇಶ ಹಾಗೂ ರಾಜ್ಯದಿಂದ ದೂರದಲ್ಲಿರುವ ಕನ್ನಡಿಗರೆಲ್ಲರಿಗೂ ಇದು ತಮ್ಮ ನಾಡು ಕರ್ನಾಟಕ ರಾಜ್ಯ ರೂಪುಗೊಂಡ ಸಂತಸ ಹಾಗೂ ತಮ್ಮ ಮಕ್ಕಳಿಗೆ ನಮ್ಮ ನಾಡಿನ ಹಿರಿಮೆಯನ್ನು ತಿಳಿಸುವ ಸದವಕಾಶ.

ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ಸಂಘ , ಮಸ್ಕತ್ – ತಮ್ಮ ನಾಡಿನಿಂದ ದೂರವಿರುವ ಕನ್ನಡಿಗರಿಗಾಗಿ ಕರ್ನಾಟಕ ಉತ್ಸವ – ೨೦೧೮ (2018) ವನ್ನು ಇಲ್ಲಿನ ಅಲ್ ಫಲಾಜ್ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಿದೆ. ಕರ್ನಾಟಕ ಸಂಘ ಹಮ್ಮಿಕೊಂಡ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ- “ಕನ್ನಡವೆನೆ ಕುಣಿದಾಡುವ ಗೇಹ , ಕನ್ನಡ ತಾಯಿಯ ಮಕ್ಕಳ ದೇಹ” – ಎಂಬ ರಾಷ್ಟ್ರ ಕವಿ ಕುವೆಂಪುರವರ ಕವಿತೆಯ ಈ ಸಾಲುಗಳನ್ನು ಅಕ್ಷರ ಸಹ ನಿಜವಾಗಿಸಿ ತೋರಿಸಿ ಕೊಟ್ಟವರು ಮಸ್ಕತಿನ ಕನ್ನಡಿಗರು. ಕರ್ನಾಟಕ ಉತ್ಸವ -೨೦೧೮ ರಂದು ಕಾತರದಿಂದ ಅವರೆಲ್ಲ ಎದುರು ನೋಡುತ್ತಿದ್ದಾರೆ!

ಅದಲ್ಲದೆ ಈ ಬಾರಿಯೂ ಕೂಡ ಮಸ್ಕತ್ತಿನ ಕರ್ನಾಟಕ ಸಮುದಾಯಕ್ಕೆ ಅನೇಕ ವಿಧಗಳಲ್ಲಿ ಗೌರವ ತಂದು ಕೊಟ್ಟ ಹೆಸರಾಂತ ವ್ಯಕ್ತಿಯೋರ್ವರನ್ನು ಮಸ್ಕತ್ ಕರ್ನಾಟಕದ ಸಂಘದ ಪರವಾಗಿ ಹೆಮ್ಮೆಯಿಂದ ” ಮಸ್ಕತ್ ಕರ್ನಾಟಕ ರತ್ನ” ಎಂಬ ಬಿರುದಿನಿಂದ :ಸನ್ಮಾನಿಸುವ ಹೆಗ್ಗಳಿಕೆಯೂ ಕೂಡ ಮಸ್ಕತ್ ಕರ್ನಾಟಕ ಸಂಘದ ಪಾಲಾಗಲಿದೆ.

“ಎಲ್ಲಾದರೂ ಇರು ಎಂತಾದರೂ ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ” ಎನ್ನುವ ಕವಿವಾಣಿಯಂತೆ ಮಸ್ಕಿತ್ತಿನಲ್ಲಿದ್ದೂ ಇಲ್ಲಿನ ಕನ್ನಡಿಗರಿಗೆ ಕನ್ನಡಮಯ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮಸ್ಕತ್ ಕರ್ನಾಟಕ ಸಂಘವು 63ನೆಯ ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ‘ಕರ್ನಾಟಕ ಉತ್ಸವ – 2018’ ಕಾರ್ಯಕ್ರಮವನ್ನು ಇದೇ ನವೆಂಬರ್ ತಿಂಗಳ 9 ನೇ ದಿನಾಂಕದಂದು ಮಸ್ಕತ್ತಿನ ಅಲ್ ಫಲಾಜ್ ಸಭಾಂಗಣದಲ್ಲಿ ಮಸ್ಕತ್ ಕನ್ನಡಿಗರಿಗಾಗಿ ಆಯೋಜಿಸಿದೆ.

ನಾಡಿನ ಹೆಸರಾಂತ ಬಹುಮುಖ ಪ್ರತಿಭೆಯ ಹಾಸ್ಯ ಕಲಾವಿದ, ಶ್ರೀ ಕೃಷ್ಣೇಗೌಡ, ಸುಗಮ ಸಂಗೀತ ಸಾಮ್ರಾಜ್ಯದ ಮಿನುಗು ತಾರೆ ಎನಿಸಿದ ಶ್ರೀಮತಿ ಎಂ.ಡಿ ಪಲ್ಲವಿ, ತಮ್ಮ ಇಂಪಾದ ಗಾಯನದಿಂದ ದೇಶ ವಿದೇಶಗಳ ಕನ್ನಡಿಗರ ಮನಗೆದ್ದ ಚಲನ ಚಿತ್ರದ ಗಾಯಕ ಶ್ರೀ ಹೇಮಂತ್ , ತಮ್ಮ ಕೋಗಿಲೆ ಕಂಠದಿಂದ ಹೃಣ್ಮನಸೂರೆಗೊಳ್ಳುವ ಹಿನ್ನೆಲೆ ಗಾಯಕಿ ಅನುರಾಧಾ ಭಟ್, ತಾಳ-ಲಯಗಳ ಚಕ್ರವರ್ತಿ ಶ್ರೀ ಅರುಣ್ ಕುಮಾರ್ ( ಡ್ರಮ್ಮರ್) ಅಲ್ಲದೆ ಶ್ರೀ ಶ್ರೀನಿವಾಸ್ ಆಚಾರ್(ಗಿಟಾರ್) ಕೀ ಬೋರ್ಡ್ ವಾದಕ ಶ್ರೀ ಉಮೇಶ್ , ಶ್ರೀ ವೇಣುಗೋಪಾಲ್ (ಕೀ ಬೋರ್ಡ್) , ತಬಲಾ ವಾದಕ ಶ್ರೀ ಪ್ರದ್ಯುಮ್ನ ಸೊರಬ- ಇವರೆಲ್ಲ ಕರ್ನಾಟಕ ಉತ್ಸವದಲ್ಲಿ ಮಿಂಚಲು ಕರ್ನಾಟಕದಿಂದ ಮಸ್ಕತ್ತಿಗೆ ಆಗಮಿಸಲಿರುವ ನುರಿತ ಕಲಾವಿದರು.

ಹಾಸ್ಯದ ಮತ್ತು ಸಂಗೀತದ ರಸದೌತಣ ಮಸ್ಕತ್ ಕನ್ನಡಿಗರಿಗಾಗಿ ಕಾಯುತ್ತಿದೆ. ಎಂದಿಗೂ ನೆನಪಿಯಲ್ಲಿ ಉಳಿಯಬೇಕಾದ ಕಾರ್ಯಕ್ರಮಗಳ ಮುಖಾಂತರ ಅನೇಕ ಯಶಸ್ವಿ ಪ್ರಯೋಗಗಳನ್ನು ಮಾಡಿರುವ ಮಸ್ಕತ್ತಿನ ಕರ್ನಾಟಕ ಸಂಘ – ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸಿ ಮಸ್ಕತ್ತಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಹಾತೊರೆಯುತ್ತಿದೆ ಎಂಬುದು ಮಸ್ಕತ್ತಿನ ಕರ್ನಾಟಕ ಸಂಘದ ಸದಸ್ಯರಿಗೆಲ್ಲರಿಗೂ ತಿಳಿದಿರುವ ವಿಷಯ.

ಕರ್ನಾಟಕ ಸಂಘದ ಪದಾಧಿಕಾರಿಗಳು. : ಶ್ರೀ ಕರುಣಾಕರ್ ರಾವ್ ಕದ್ರಿ- ಅಧ್ಯಕ್ಷರು, ಶ್ರೀ ರಮೇಶ್ ಕುಮಾರ್ ಉಪಾಧ್ಯಕ್ಷರು, ಶ್ರೀ ಭೀಮ್ ನೀಲಕಂಠರಾವ್ ಹಂಗರಗೆ – ಕೋಶಾಧಿಕಾರಿ, ಶ್ರೀಮತಿ ಜಯಲಕ್ಷ್ಮಿ ಶೆಣೈ – ಸಾಂಸ್ಕೃತಿಕ ಕಾರ್ಯದರ್ಶಿ, ಶ್ರೀಮತಿ ಭಾರತಿ ಬಲಗುರಗಿ – ಮಹಿಳಾ ಸಂಘಟನ ಕಾರ್ಯದರ್ಶಿ, ಶ್ರೀ ರಾಮಚಂದ್ರಪ್ಪ – ಸಮುದಾಯ ಕಲ್ಯಾಣ ಕಾರ್ಯದರ್ಶಿ, ಶ್ರೀ ಹಿತೇಶ್ ಮಂಗಳೂರು – ಕ್ರೀಡಾ ಕಾರ್ಯದರ್ಶಿ ಹಾಗೂ ಶ್ರೀ ಕೆ. ಎಸ. ರಾಜು- ಉಪ ಕೋಶಾಧಿಕಾರಿ.

ವರದಿ : ಕನ್ನಡದ ಕಂದ

Comments are closed.