ಗಲ್ಫ್

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯರ ದಿವ್ಯ ಸಾನಿಧ್ಯದಲ್ಲಿ ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ನವೆಂಬರ್ 2018 – ಪೂರ್ವಭಾವಿ ಸಭೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ “ವಿಶ್ವ ತುಳು ಸಮ್ಮೇಳನ ದುಬಾಯಿ” 2018 ನವೆಂಬರ್ 23ನೇ ತಾರೀಕು ಶುಕ್ರವಾರ ಮತ್ತು 24ನೇ ಶನಿವಾರ ದುಬಾಯಿಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಪೂರ್ವಭಾವಿ ಸಭೆ 2018 ಜೂನ್ 29ನೇ ತಾರೀಕು ಶುಕ್ರವಾರ ಸಂಜೆ 6.00 ಗಂಟೆಗೆ ದುಬಾಯಿ ಬುರ್ಜು ಖಲಿಫಾ ರೆಸಿಡೆನ್ಸಿಸ್ ಮಲ್ಟಿಫಂಕ್ಷನ್ ಹಾಲ್ ನಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕರು ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀಯುತರುಗಳಾದ ಬಿ. ಕೆ. ಗಣೇಶ್ ರೈ, ಶೋಧನ್ ಪ್ರಸಾದ್, ದೇವ್ ಕುಮಾರ್ ಕಾಂಬ್ಲಿ, ಆಲ್ವಿನ್ ಪಿಂಟೊ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು ಮತ್ತು ಶ್ರೀಮತಿ ಸುವರ್ಣ ಸತೀಶ್, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ, ಶಶಿ ರವಿರಾಜ್ ಶೆಟ್ಟಿ ಭಾಗವಹಿಸಿದ್ದರು.

ಕೊಲ್ಲಿ ತುಳುವರು, ಅಖಿಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾಗರೋತ್ತರ ತುಳುವರು ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು – ಪರಮ ಪೂಜ್ಯ ಪದ್ಮ ವಿಭೂಷಣ ಪುರಸ್ಕೃತ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾಗಿ ಅಬುಧಾಬಿ ಎನ್. ಎಂ. ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ.

ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಂದನೀಯ ಧರ್ಮಧ್ಯಾಕ್ಷರು ಮತ್ತು ಮುಸ್ಲಿಂ ಪ್ರವಚನಕಾರರು ಮತ್ತು ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ.

ತುಳು ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತ್ತಾರ್, ಕುವೈತ್, ಸೌದಿ ಅರೇಬಿಯಾ, ಒಮಾನ್ ಮತ್ತು ಯು.ಎ.ಇ.ಯ ಹಲವು ಜಾನಪದ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ.

ಐತಿಹಾಸಿಕ ದಾಖಲೆಯಾಗಲಿರುವ ವಿಶ್ವ ತುಳು ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ ಲೋಕಾರ್ಪಣೆ ಗೊಳ್ಳಲಿದೆ.

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ ತುಳು ಸಾಹಿತ್ಯ ಗೋಷ್ಠಿ – ತುಳು ಕೋಡೆ – ಇನಿ – ಎಲ್ಲೆ. ದೈವಾರಾಧನೆ ಮತ್ತು ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಥಿ, ತುಳು ರಂಗ ಭೂಮಿ ಮತ್ತು ಚಲನ ಚಿತ್ರ ಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು ವಿದ್ವಾಂಸರು ಕಲಾವಿದರು ಭಾಗವಹಿಸಲಿದ್ದಾರೆ.

ವಿಶ್ವ ತುಳು ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಬೆಂಬಲವನ್ನು ಕೋರಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿಯೋಂದಿಗೆ ಯು.ಎ.ಇ.ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳನ್ನು ಮತ್ತು ಭಾರತದಲ್ಲಿ ಹಾಗೂ ವಿದೇಶಗಳಲ್ಲಿರುವ ತುಳು ಭಾಷಾ ಸಂಘ ಸಂಸ್ಥೆಗಳನ್ನು ಶೀಘ್ರದಲ್ಲಿ ಸಂಪರ್ಕಿಸಲಾಗುವುದು ಎಂದು ಶ್ರೀ ಸರ್ವೋತ್ತಮ ಶೆಟ್ಟಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.