ಜಿದ್ದಾ,: ಕೊಲೆ ಅಪರಾಧಕ್ಕಾಗಿ ರಾಜಕುಮಾರ ತುರ್ಕಿ ಬಿನ್ ಸೌದ್ ಅಲ್-ಕಬೀರ್ ಅವರಿಗೆ ಮರಣ ದಂಡನೆಯನ್ನು ಜಾರಿಗೊಳಿಸಿರುವುದನ್ನು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ಮಂಗಳವಾರ ದೃಢಪಡಿಸಿದೆ.
ರಿಯಾದ್ನ ಹೊರವಲಯದ ಅಲ್-ತುಮಾಮಾ ಪ್ರದೇಶದಲ್ಲಿ ವಿವಾದವೊಂದರಲ್ಲಿ ಸೌದಿ ಯುವಕನೋರ್ವನನ್ನು ಹತ್ಯೆಗೈದಿದ್ದಕ್ಕಾಗಿ ರಾಜಕುಮಾರನನ್ನು ತಪ್ಪಿತಸ್ಥನೆಂದು ಸೌದಿ ನ್ಯಾಯಾಲಯವೊಂದು ಮೂರು ವರ್ಷಗಳ ಹಿಂದೆ ಘೋಷಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಿದ್ದ ಸೌದಿ ಅರೇಬಿಯದ ಪರಮೋಚ್ಚ ನ್ಯಾಯಾಲಯವು ಮರಣ ದಂಡನೆಯನ್ನು ಖಾಯಂಗೊಳಿಸಿತ್ತು.
‘ರಕ್ತ ಹಣ’ವನ್ನು ತಿರಸ್ಕರಿಸಿದ್ದ ಕೊಲೆಯಾಗಿದ್ದ ಯುವಕನ ಕುಟುಂಬವು ನ್ಯಾಯಕ್ಕಾಗಿ ಆಗ್ರಹಿಸಿತ್ತು. ಭದ್ರತೆ,ನ್ಯಾಯ ಮತ್ತು ದೇವರ ತೀರ್ಪುಗಳ ಜಾರಿಯಲ್ಲಿ ದೊರೆ ಸಲ್ಮಾನ್ ತೀವ್ರ ಆಸಕ್ತಿ ವಹಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು, ಅಮಾಯಕ ಜನರ ಮೇಲೆ ಹಲ್ಲೆ ನಡೆಸುವ ಮತ್ತು ರಕ್ತಪಾತಕ್ಕೆ ಕಾರಣವಾಗುವವರಿಗೆ ಕಾನೂನಿನ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದೆ.
Comments are closed.