ಅರಬ್ ಸಂಯುಕ್ತ ಸಂಸ್ಥಾನದ ಲಾಲ್ ಬಾಗ್ ಎಂದೇ ಪ್ರಖ್ಯಾತಿಯನ್ನು ಪಡೆದ ಹಸಿರು ಉಧ್ಯಾನ ನಗರಿ ಅಲ್ ಐನ್ ವಿಭಾಗದಲ್ಲಿ ಕಳೆದ ದಶಕದಲ್ಲಿ ಅಭಿಮಾನಿ ಕನ್ನಡಿಗರು ಒಗ್ಗೂಡಿ ಕಟ್ಟಿದ ಅಲ್ ಐನ್ ಕನ್ನಡ ಸಂಘ ತನ್ನ 12ನೇ ವಾರ್ಷೀಕೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.
2015 ಮೇ 1ನೇ ತಾರೀಕು ಶುಕ್ರವಾರ ಅಲ್ ಐನ್ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ದಿನ ಪೂರ್ತಿನಡೆದ 12ನೇ ವಾರ್ಷೀಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈ, ಶ್ರೀಮತಿ ಮಂಜುಳಾ ಗಣೇಶ್ ರೈ, ದುಬಾಯಿಯ ಉಧ್ಯಮಿ ಶ್ರೀ ಕಿರಣ್ ಪಡುವಾಳ್ ಮತ್ತು ಅಲ್ ಐನ್ ಜ್ಯೂನಿಯರ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಶದ್ ಹಾಗೂ ಶ್ರೀಮತಿ ತನ್ವೀರ್ ಅರ್ಶದ್ ರವರನ್ನು ಕನ್ನಡ ಸಂಘದ ಎಲ್ಲಾ ಪೂರ್ವ ಅಧ್ಯಕ್ಷರುಗಳು, ಸುಮಂಗಲೆಯರೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಅಲ್ ಐನ್ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಮಧುಸೂಧನ್ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಅಪ್ಪಟ ಕನ್ನಡ ಶೈಲಿಯ ಉಡುಗೆ ತೊಡುಗೆಯೊಂದಿಗೆ ಸಂಭ್ರಮದಲ್ಲಿದ್ದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಖ್ಯ ಅತಿಥಿಗಳು ಜ್ಯೋತಿಬೆಳಗಿಸಿ 12 ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಸದಸ್ಯರು ಮತ್ತು ಪುರುಷರ ತಂಡದವರಿಂದ ಸ್ವಾಗತ ಗೀತೆ ಹಾಗೂ ಕು| ಸರ್ವಮಂಗಳಾ ಮತ್ತು ಕು| ಪ್ರತಿಕ್ಷಾ ರವರಿಂದ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು.
ಜನಮನಸೆಳೆದ “ಮೈಸೂರು ವೈಭವ”
ಸುಂದರ ಮೈಸೂರು ಅರಮನೆಯ ದೀಪಾಲಂಕೃತ ದೃಶ್ಯ ವೈಭವದ ಚಿತ್ರಪಟ ವೇದಿಕೆಯ ಸೌಂದರ್ಯವನ್ನು ಹಿಮ್ಮಡಿಗೊಳಿಸಿದ್ದು, ಅಲ್ ಐನ್ ಕನ್ನಡ ಸಂಘದ ಪೂರ್ವ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಪ್ರಸ್ತುತ ಪಡಿಸಿದ “ಮೈಸೂರು ವೈಭವ” ಕನ್ನಡ ನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಜಾನಪದ ತಂಡಗಳು ಮೆರವಣಿಗೆ ಕನ್ನಡಾಂಬೆಯ ಸಮ್ಮುಖದಲ್ಲಿ ಮಹಾರಾಣಿ ಸಹಿತ ಚಾಮುಂಡೇಶ್ವರಿ ದೇವಿ ಪದತಲದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಮಹಾರಾಜರ ದರ್ಬಾರ್, ಟುಪ್ಪು ಸುಲ್ತಾನ್, ಪಿಟಿಲು ಚೌಡಯ್ಯ, ಸರ್ ಎಂ. ವಿಶ್ವೇಶ್ವರಯ್ಯ, ವೀಣೆ ಶೇಷಣ್ಣ, ಕು.ವೆಂ.ಪು., ಮೈಸೂರು ಅನಂತಸ್ವಾಮಿ, ಕಾದಂಬರಿಕಾರ್ತಿ ತ್ರಿವೇಣಿ, ಕೆ. ಎಸ್. ನರಸಿಂಹಸ್ವಾಮಿ, ಕ್ರೀಡಾಪಟು ಬಿ. ಎಸ್. ಚಂದ್ರಶೇಖರ್, ಕನ್ನಡ ಚಲನಚಿತ್ರ ಭೀಷ್ಮ ಕೆ. ಎಸ್. ಅಶ್ವತ್, ಪೂರ್ಣಚಂದ್ರ ತೇಜಸ್ವಿ, ಇವರುಗಳ ಅಭಿನಯದೊಂದಿಗೆ ಡಿಜಿಟಲ್ ಚಿತ್ರಪಟದಲ್ಲಿ ಸಂದರ್ಭಕ್ಕನುಸಾರವಾಗಿ ಸನ್ನಿವೇಶಗಳ ಚಿತ್ರಮೂಡಿಬರುತ್ತಿದ್ದು “ಮೈಸೂರು ಸುವರ್ಣ ಯುಗ” ವೇದಿಕೆಯಲ್ಲಿ ಪ್ರತಿಬಿಂಭಿಸಿ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.
ಭಾಗವಹಿಸಿದ ಕಲಾವಿದರು ಶ್ರೀಮತಿ ಅಪರ್ಣಾ ಜಯಪ್ರಕಾಶ್, ಶ್ರೀಮತಿ ಕಾಮಿನಿ ಮುರಳಿಧರ್, ಶ್ರೀಯುತರುಗಳಾದ ಮುರಳಿಧರ್, ಹರೀಶ್ ಯು.ಪಿ., ಜನಾರ್ಧನ್, ವಿಮಲ್ ಕುಮಾರ್, ಡಾ| ಸ್ವಾಮಿ, ಡಾ| ಕುಮಾರ್, ಡಾ| ರಾಮಚಂದ್ರಭಟ್, ಡಾ| ಉಮಾ. ಮೈಸೂರು ವೈಭವ ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಮತಿ ಕಾಮಿನಿ ಮುರಳಿಧರ್. ಪುಟ್ಟ ಮಕ್ಕಳ ಕನ್ನಡ ಶ್ಲೋಕ ಪಠಣ, ವಚನಗಳಗಳು ಸರ್ವರ ಗಮನ ಸೆಳೆಯಿತು. ಮಕ್ಕಳಾದ ಯಶಸ್ಸ್, ವಿಸ್ಮಯ, ಶ್ರೇಯಶ್, ಪ್ರತೀಕ್ಷಾ, ಸರ್ವಮಂಗಳಾ, ಅನುಷ್ಕಾ, ಸಿದ್ದಾರ್ಥ್, ರಯಾನ್ ಸಮೂಹ ನೃತ ಪ್ರದರ್ಶನ ನೀಡಿದರು.
ಸನ್ಮಾನ ಸಮಾರಂಭ
ಸಮಾರಂಭದ ಮುಖ್ಯ ಅತಿಥಿಗಳನ್ನು ಕನ್ನಡ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಅತ್ಯಂತ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಕನ್ನಡದ ಮಕ್ಕಳನ್ನು ಅವರ ಪೋಷಕರ ಸಹಿತ ಅಭಿನಂಧಿಸಿ ಗೌರವಿಸಲಾಯಿತು. ಯು.ಎ.ಇ. ಪ್ರತಿಷ್ಠಿತ ಪ್ರಶಸ್ತಿ “ಶೇಖ್ ಹಂದಾನ್ ಪ್ರಶಸ್ತಿ” ಪುರಸ್ಕೃತೆ ಕು| ಮನಸ್ವಿ, ತಂದೆ ಡಾ| ಉದಯ ಶೆಟ್ಟಿ ತಾಯಿ ಶ್ರೀಮತಿ ಸ್ಮಿತಾ ಶೆಟ್ಟಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರಾದ ಶ್ರೀ ಮುರಳಿ ದಂಪತಿಗಳನ್ನು ಮತ್ತು ಶ್ರೀಮತಿ ಸಂಧ್ಯಾ ಅರುಣ್ ಉಳ್ಳಾಲ್ ಇವರುಗಳನ್ನು ಸನ್ಮಾನಿಸಲಾಯಿತು.
ಮಹಾದಾನಿ ಡಾ| ಸ್ವಾಮಿಯವರಿಗೆ ಹೃದಯಸ್ಪರ್ಶಿ ಸನ್ಮಾನ
ಅಲ್ ಐನ್ ಕನ್ನಡ ಸಂಘದ ಪೂರ್ವ ಅಧ್ಯಕ್ಷರಾದ ಡಾ| ಮೂಕಯ್ಯ ವೀರಯ್ಯ ಸ್ವಾಮಿ ಕಳಸೂರುಮಠ್ ತಮ್ಮ ಹುಟ್ಟೂರಿನ ತಾವು ಕಲಿತ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಕೋಟಿ ರೂಪಾಯಿಗಿಂತಲು ಹೆಚ್ಚು ಧನ ಸಹಾಯ ನೀಡಿ ಕರ್ನಾಟಕ ರಾಜ್ಯದಲ್ಲೆ ಮಾದರಿ ಶಾಲೆಯನ್ನಾಗಿಸಿದ ಸಂದರ್ಶನ ವರದಿ ಎಲ್ಲಾ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಅರಬ್ ದೇಶದಲ್ಲಿ ತಮ್ಮ ದುಡಿತದ ಹೆಚ್ಚಿನ ಪಾಲು ಹಣವನ್ನು ತಾನು ವ್ಯಾಸಂಗ ಮಾಡಿದ ಶಾಲೆಗಾಗಿ ವಿನಿಯೋಗಿಸಿ ಇತರರಿಗೆ ಮಾರ್ಗದರ್ಶಿಯಾದ ಡಾ| ಸ್ವಾಮಿಯವರನ್ನು ಅಲ್ ಐನ್ ಕನ್ನಡ ಸಂಘದ ಸರ್ವ ಸದಸ್ಯರು ಹೃದಯಸ್ಪರ್ಶಿ ಸನ್ಮಾನ ನೀಡಿ ಗೌರವಿಸಿದರು. ಶ್ರೀ ಹರೀಶ್ ಯು. ಪಿ. ಸನ್ಮಾನ ಪ್ರಕ್ರೀಯೆ ನಡೆಸಿಕೊಟ್ಟರು.
ಪ್ರೇಕ್ಷಕರ ನೆನಪಿನ ಶಕ್ತಿಯನ್ನು ಚುರುಕು ಗೊಳಿಸಿದ ರಸಪ್ರಶ್ನೆ ಕಾರ್ಯಕ್ರಮ
ಸಭಾಂಗಣದಲ್ಲಿ ಆಸೀನರಾಗಿದ್ದ ಸರ್ವರನ್ನು ರಸ ಪ್ರಸ್ನೆ ಕಾರ್ಯಕ್ರಮ ತಮ್ಮ ತಮ್ಮ ಸ್ಮರಣಶಕ್ತಿಗೆ ಸವಾಲ್ ಹಾಕಿದಂತ್ತಿದ್ದು ತಮ್ಮ ಕಲಿಕೆಯ ದಿನದ ಉತ್ತರಗಳನ್ನು ನೆನಪಿಸಿಕೊಂಡು ಭಾಗವಹಿಸಿದರು. ಡಾ| ಸ್ವಾಮಿಯವರು ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಸಿಕೊಟ್ಟರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಅಂತ್ಯಾಕ್ಷರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಧುರ ಗೀತೆಗಳನ್ನು ಸವಿಯುವಂತೆ ಮಾಡಿದರು ಶ್ರೀಮತಿ ಶಾಲಿನಿ ಮತ್ತು ಶ್ರೀಮತಿ ಕಾಮಿನಿ ಮುರಳಿದರ್ ಅತ್ಯಂತ ಸೊಗಸಾಗಿ ನಡೆಸಿಕೊಟ್ಟರು.
ಕಾರ್ಯಕ್ರಮ ನಿರೂಪಣೆಯಲ್ಲಿ ಶ್ರೀಮತಿ ಸವಿತಾ ನಾಯಕ್, ಶ್ರೀ ಉಮ್ಮರ್ ಫರೂಕ್ ಇವರೊಂದಿಗೆ ಶ್ರೀಯುತರುಗಳಾದ ಮಧು, ಶ್ರೇಯಾಂಕ್, ನೂರ್, ರಾಘವೇಂದ್ರ, ಗಣೇಶ್, ಸರ್ಫರಾಜ್, ಡಾ| ಜಯಂತ್ ಶ್ರೀಮತಿಯರಾದ ಶಾಲಿನಿ ಆಲೂರ್, ರೇಶ್ಮ ವಿಮಲ್ ಕುಮಾರ್ ಮತ್ತು ಡಾ| ಕೃಪಾ ಕಾರ್ಯಕ್ರಮದ ಹಿಂದಿನ ರುವಾರಿಗಳು.
ಅಲ್ ಐನ್ ವಿಭಾಗದಲ್ಲಿ ಕನ್ನಡಿಗರು ಒಗ್ಗೂಡಿ ದಿನಪೂರ್ತಿ ನಡೆದ ಅಪ್ಪಟ ಅಭಿಮಾನದಿಂದ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಕಲೆ ಸಂಸ್ಕೃತಿಯ ಧ್ವಜವನ್ನು ಎತ್ತಿ ಹಿಡಿದರು. ಉತ್ಸಾಹಿ ಯುವಕರ ಕಾರ್ಯಕಾರಿ ತಂಡದ ಹಲವು ದಿನಗಳ ವ್ಯವಸ್ಥಿತ ಪೂರ್ವತಯಾರಿ, ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.