ಕುವೈತ್: ಗಲ್ಫ್ ರಾಷ್ಟ್ರ ಕುವೈತ್ನಲ್ಲಿ ಅನಿವಾಸಿ ಕನ್ನಡಿಗರಿಂದ ಕನ್ನಡನಾಡು, ನುಡಿ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಘ, ಕುವೈತ್ ಕನ್ನಡ ಕೂಟ 1984ರಲ್ಲೆ ಸ್ಥಾಪನೆಗೊಂಡು, 2015ರಲ್ಲಿ ತನ್ನ ಸೇವೆಯ 31ನೆಯ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಇತ್ತೀಚೆಗೆ ನೆಡೆದ ವಾರ್ಷಿಕ ಮಹಾಸಭೆಯಲ್ಲಿ 2015ರ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಚುನಾವಣಾಧಿಕಾರಿಯಾಗಿ ಕೂಟದ ಮಾಜಿ ಅಧ್ಯಕ್ಷರಾದ ಡಾ|ಸುರೇಂದ್ರ ನಾಯಕ್ ಕಾಪಾಡಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿ, ಅಧ್ಯಕ್ಷರಾಗಿ ಸುಧೀರ್ ಶೆಣೈ, ಉಪಾಧ್ಯಕ್ಷರಾಗಿ ಗಿರೀಶ್ ಶೆಣೈ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕಟ್ಟಿ, ಹಾಗೂ ಖಜಾಂಚಿಯಾಗಿ ಕಿರಣ್ ಭಟ್ ರವರು ಆಯ್ಕೆಯಾಗಿದ್ದಾರೆಂದು ತಿಳಿಸಿದರು. ಮಹಾಸಭೆಯ ಅಂಗವಾಗಿ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಜರುಗಿದವು. ಕಾರ್ಯಕಾರಿ ಸಮಿತಿ ಸದಸ್ಯರು ಕುವೈತ್ನ ಭಾರತೀಯ ಧೂತಾವಾಸದಲ್ಲಿ ರಾಯಭಾರಿ ಮಹಾಮಹಿಮ ಶ್ರೀಯುತ ಸುನೀಲ್ ಜೈನ್ ರವರನ್ನು ಭೇಟಿಯಾಗಿ ಕುವೈತ್ ಕನ್ನಡ ಕೂಟದ ಬಗ್ಗೆ ಹಾಗೂ ಕೂಟದ ಪ್ರಸಕ್ತ ವರ್ಷದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ರಾಯಭಾರಿಯವರು ಕುವೈತ್ ಕನ್ನಡ ಕೂಟದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು.