ಕುವೈಟ್: ನವ ಚೇತನ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನವೆಂಬರ್ 14 ರಂದು ಶುಕ್ರವಾರ, ಮಿಶ್ರಿಫ್ ಉಧ್ಯಾನದಲ್ಲಿ ಒಂದು ದಿನದ ಕುಟುಂಬ ವಿಹಾರಕೂಟ ಮತ್ತು ಕ್ರೀಡಾದಿನವು ಅದ್ದೂರಿಯಾಗಿ ನೆಡೆಯಿತು. ಅನಿವಾಸಿ ಭಾರತೀಯರ ನಡುವೆ ಪರಸ್ಪರ ಸಹೋದರ ಬಾಂಧವ್ಯತೆ ಮತ್ತು ಪರಸ್ಪರ ಆತ್ಮೀಯತೆ ವೃದ್ಧಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗ್ಗಿನಿಂದ ಸಾಯಂಕಾಲದವರೆಗೆ ನಡೆದ ಕಾರ್ಯಕ್ರಮದಲ್ಲಿ ಸಹಸ್ರಾರು ಅನಿವಾಸಿ ಭಾರತೀಯರು, ವಿಶೇಷವಾಗಿ ಅನಿವಾಸಿ ಕನ್ನಡಿಗರು ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.
ಮಕ್ಕಳಿಗೆ ಗೋಣಿಚೀಲ ಓಟ, ಸಂಗೀತಕುರ್ಚಿ ಮೊದಲಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರಿಗೆ ತ್ರೋಬಾಲ್, ವಾಲಿಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗೆ ಪ್ರತ್ಯೇಕವಾಗಿ ಸಂಗೀತಕುರ್ಚಿ ಸ್ಪರ್ಧೆ ಮತ್ತು ಪುರುಷರ ಕಬಡ್ಡಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನೆರೆದ ಜನ ಸಮೂಹವನ್ನು ಮನರಂಜಿಸಿತು. ಅಷ್ಟೇ ಅಲ್ಲದೆ, ಮಡಕೆ ಒಡೆಯುವ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚೆಂಡು ಎಸೆದು ಹಿಡಿಯುವ ಸ್ಪರ್ಧೆ, ತೆಂಗಿನಕಾಯಿ ಕಟ್ಟುವ ಸ್ಪರ್ಧೆ, ಹೌಸಿಹೌಸಿ ಮೊದಲಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.
ಆಹ್ಲಾದಕರವಾದ ಬಿಸಿಲು ತಂಪು ಮಿಶ್ರಿತ ವಾತವರಣದಲ್ಲಿ ನೆಡೆದ ಈ ಕಾರ್ಯಕ್ರಮವನ್ನು ಬೆಳಗ್ಗೆ ಅಡ್ವೋಕೇಟ್ ಜೆ. ಕೆ. ಆಳ್ವ ರವರು ಮಕ್ಕಳ ಜೊತೆಗೂಡಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಉದ್ಘಾಟಿಸಿದರು. ನವ ಚೇತನ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಅಶೋಕ್ ಡಿ. ಸಾಲ್ಯಾನ್ ರವರು ವಿಹಾರಾರ್ಥಿಗಳನ್ನು ಹಾಗೂ ಸ್ಪರ್ಧಾಕಾಂಕ್ಷಿ ಗಳನ್ನು ಸ್ವಾಗತಿಸಿದರು. ಶ್ರೀ ಜನಾಬ್ ಹಸನ್ ಯೂಸುಫ್ ಅವರು ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ನವ ಚೇತನ ವೆಲ್ಫೇರ್ ಅಸೋಸಿಯೇಷನ್ ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಜೆ 4.30 ಗಂಟೆಗೆ ವಿಜೇತರಿಗೆ ಬಹುಮಾನ ನೀಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯ ಸಮಾರಂಭ ನಡೆಯಿತು. ಎಲ್ಲಾ ವಿಜೇತರು ಮತ್ತು ಸ್ಪರ್ಧಿಗಳು ನವ ಚೇತನ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನೀಡಲಾದ ಅಮೂಲ್ಯವಾದ ಉಡುಗೊರೆಗಳನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಅದೃಷ್ಟಚೀಟಿ ವಿಜೇತರನ್ನು ಕೂಡ ಘೋಷಿಸಲಾಯಿತು. ಶ್ರೀ ಅನಿಲ್ ಶೆಟ್ಟಿ, ಶ್ರೀ ಪುರುಷೋತ್ತಮ ಕುಕ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಪಾಸ್ಕಲ್ ಪಿಂಟೋ, ಶ್ರೀ ವಿವೇಕ್ ಶೆಟ್ಟಿ ಬೆಳ್ಮಣ್, ಶ್ರೀ ದಿವಿನ್ ಮೆಂಡಾ, ಶ್ರೀ ಪ್ರವೀಣ್ ಮಿನೆಜಸ್, ಶ್ರೀ ಜೇಮ್ಸ್ ಪೌಲ್ ಮತ್ತು ಶ್ರೀ ಪಂಡರಿ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುವೈಟಿನ ಬಹುತೇಕ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ 9.30 ರಿಂದ ಸಾಯಂಕಾಲ 5.೦೦ ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ ಯನ್ನೊಳಗೊ೦ಡ ಹಲವು ವಿನೋದಾವಳಿ ಕ್ರೀಡೆಗಳನ್ನು ಏರ್ಪಡಿಸಿದ್ದು ಮಕ್ಕಳು, ಯುವಕ-ಯುವತಿಯರು, ವಯಸ್ಕರಾದಿಯಾಗಿ ಎಲ್ಲರೂ ಸ೦ತೋಷದಿ೦ದ ಇಡೀದಿನವನ್ನು ಕಳೆದರು. ಕರ್ನಾಟಕ ಶೈಲಿಯ ಉಪಾಹಾರ ಮತ್ತು ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ನವ ಚೇತನ ವೆಲ್ಫೇರ್ ಅಸೋಸಿಯೇಷನ್, ಕುವೈತ್ ನ ಸಮಸ್ತ ಸದಸ್ಯರ ಸತತ ಪರಿಶ್ರಮ ಹಾಗೂ ಪ್ರಾಯೋಜಕರ ಸಹಕಾರದಿಂದ ಈ ಕಾರ್ಯಕ್ರಮವು ವಿದೇಶಿ ನೆಲದಲ್ಲಿ ಅಪಾರ ಯಶಸ್ಸು ಪಡೆಯಲು ಕಾರಣವಾಯಿತು.
ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.