ಮಂಗಳೂರು,ಮೇ.22 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಅಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ” ಎಂಬ ವೈವಿಧ್ಯಮಯ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಮಂಗಳೂರಿನ ಪುರಭವನದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತ್ತು.
ಕಾರ್ಯಕ್ರಮವನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ಹರಿನಾರಾಯಣ ಅಸ್ರಣ್ಣರು ಉದ್ಘಾಟಿಸಿ, ಆಶೀರ್ವಚನ ನೀಡಿದರು. ನಿಟ್ಟೆ ವೈದ್ಯಕೀಯ ಮತ್ತು ವಿದ್ಯಾ ಸಂಸ್ಥೆಗಳ ಉಪಕುಲಾಧಿಪತಿ ಡಾ.ಎಂ ಶಾಂತರಾಮ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲ್, ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಶಾರಾದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಕನ್ನಡ ಸಾಹಿತ್ಯಾ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮಧರ್ಶಿ ಹರಿಕೃಷ್ಣ ಪುನರೂರು, ಸವಣೂರು ಸೀತಾರಾಮ್ ಶೆಟ್ಟಿ, ದ.ಕ.ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ ಮತ್ತಿತ್ತರರು ಅತಿಥಿಗಳಾಗಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಟ್ರಷ್ಠಿಗಳು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ್ ಭಂಡಾರಿ ಅಡ್ಯಾರು ಹಾಗೂ ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರಾವಳಿಯ ಹೆಮ್ಮೆಯ ಶ್ರೇಷ್ಠ ಕಲೆಗಳಲ್ಲಿ ಒಂದಾದ ಯಕ್ಷಗಾನದ ಬಗ್ಗೆ ಅಭಿಯಾನವನ್ನು ಹುಟ್ಟುಹಾಕಿ ಪ್ರೋತ್ಸಾಹಿಸುವುದರೊಂದಿಗೆ, ತಿಟ್ಟು -ಮಟ್ಟುಗಳ ಭೇಧವಿಲ್ಲದೆ ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಅಂತರಂಗವನ್ನು ಅರಿತು, ಅಶಸ್ತ ಕಲಾವಿದರ ಸಮಸ್ಯೆಗೆಗಳಿಗೆ ಸ್ಪಂದಿಸುವುದರೊಂದಿಗೆ ಅವರ ಬಾಳಿನಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸುವ ಸತ್ ಚಿಂತನೆಯೊಂದಿಗೆ ಸಮಾನ ಮನಸ್ಕ ಬಂಧುಗಳ ಸಹಾರದೊಂದಿಗೆ 2015ನೇ ಸೆಪ್ಟೆಂಬರ್ ತಿಂಗಳನಲ್ಲಿ ಕಟೀಲಿನ ತಾಯಿ ಭ್ರಮಾರಾಂಭಿಕೆಯ ಸನ್ನಿಧಾನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಎಂಬ ಟ್ರಸ್ಟ್ನ ಉದ್ಘಾಟಿಸಲಾಯಿತು.
ಯಕ್ಷಗಾನ ವೃತ್ತಿರಂಗದಲ್ಲಿ ಸೇವೆ ಸಲ್ಲಿಸುವ ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವನ್ನಿಟ್ಟುಕೊಂಡು ಸಪ್ಟೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಉದ್ಘಾಟನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಎಂಬ ಸೇವಾ ಸಂಸ್ಥೆ ಅನೇಕ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈಗಾಗಲೇ ತೆಂಕು ಹಾಗೂ ಬಡಗುತಿಟ್ಟಿನ 11 ಮಂದಿ ಅಶಕ್ತ ಕಲಾವಿದರಿಗೆ ತಲಾ ರೂ. 50,000/-ಗಳ ಗೌರವ ಧನ ಹಾಗೂ ವಿಧಿವಶರಾದ ಐವರು ಕಲಾವಿದರ ಕುಟುಂಬಕ್ಕೆ ತಲಾ ರೂ. 50,000/-ಗಳ ಪರಿಹಾರ ಧನ, ಅಪಘಾತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 4 ಜನ ಕಲಾವಿದರಿಗೆ ತಲಾ ರೂ. 25,000/-ಗಳ ಚಿಕಿತ್ಸಾ ವೆಚ್ಚವನ್ನು ನೀಡಿ ಕಲಾವಿದರಲ್ಲಿ ಹಾಗೂ ಅವರ ಕುಟುಂಬದಲ್ಲಿ ಸ್ಥೈರ್ಯ ತುಂಬಿಸುವ ಕೆಲಸವನ್ನು ಮಾಡಲಾಗಿದೆ. ಟ್ರಸ್ಟಿನ ಇನ್ನಷ್ಟು ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಂದು ‘ಯಕ್ಷಧ್ರುವ ಪಟ್ಲ ಸಂಭ್ರಮ” ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮ :
ಬೆಳಿಗ್ಗೆ 9ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಕಲಾವಿದರುಗಳಿಂದ ಯಕ್ಷಗಾನ ಪೂರ್ವರಂಗ ಕಾರ್ಯಕ್ರಮ ನಡೆಯಿತು, ಪೂರ್ವಾಹ್ನ 11ರಿಂದ 1ರ ವರೆಗೆ ಯಕ್ಷ ಸಪ್ತಸ್ವರ ಕಾರ್ಯಕ್ರಮ ನಡೆಯಿತು, ಕರಾವಳಿಯ ಪ್ರಸಿದ್ಧ ಏಳು ಭಾಗವತರಿಂದ ಭಾಗವತಿಕೆ ನಡೆಯಿತು. ಮಧ್ಯಾಹ್ನ 1.30ರಿಂದ ಅಪರಾಹ್ನ 2.30ರ ವರೆಗೆ ರಾಧಾ ವಿಲಾಸ ಯಕ್ಷಗಾನ ನಾಟ್ಯ ವೈಭವ ಜರಗಿತು, ಅಪರಾಹ್ನ 2.30ರಿಂದ ತುಳುನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಳು ತಾಳಮದ್ದಳೆ ಜರಗಿತು.
ಇದೇ ಸಂದರ್ಭದಲ್ಲಿ ಪುರಭವನದ ಆವರಣದಲ್ಲಿ ಟ್ರಸ್ಟ್ನ ಸದಸ್ಯರು ಹಾಗೂ ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಬಳಿಕ ಟ್ರಸ್ಟ್ನ ಸದಸ್ಯರು ಹಾಗೂ ಯಕ್ಷಾಭಿಮಾನಿ ಮತ್ತು ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಕಣ್ಣು ಪರೀಕ್ಷೆ, ಔಷಧ ವಿತರಣೆ ಮಾಡಲಾಯಿತು.
ಸಂಜೆ ವಿಶೇಷ ಕಾರ್ಯಕ್ರಮದೊಂದಿಗೆ ಸಮಾರೋಪ :
ಸಂಜೆ 5ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಾದ ಶ್ರೀ ಪೆರುವಾಯಿ ನಾರಾಯಣ ಶೆಟ್ಟರಿಗೆ 2016ನೇ ಸಾಲಿನ ಪಟ್ಲ ಪ್ರಶಸ್ತಿ ಪ್ರದಾನ, ಖ್ಯಾತ ಅರ್ಥಧಾರಿಗಳಾದ ಶ್ರೀ ಜಬ್ಬಾರ್ ಸಮೋ ಸಂಪಾಜೆ ಇವರಿಗೆ ಯಕ್ಷ ಗೌರವ ಮನ್ನಣೆ, ಯಕ್ಷಗಾನ ಕಲಾವಿದರಿಗೆ ಅಪಘಾತ ವಿಮಾ ಯೋಜನೆಗೆ ಚಾಲನೆ, ತೆಂಕು-ಬಡಗುತಿಟ್ಟಿನ 15 ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ. ಗಳ ಗೌರವ ಧನ ಸಹಾಯ ವಿತರಣೆ, ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಮೇಲ್ಪಟ್ಟು ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಚಿನ್ನದ ಪದಕ ಪ್ರದಾನ ಕಾರ್ಯಕ್ರಮಗಳು ಜರಗಲಿದೆ.
ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ-ನಟಿಯರುಗಳಾದ ದರ್ಶನ್, ತಾರಾ, ನಂದಿನಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 7.30ರಿಂದ ಹೊಸನಗರ ಮೇಳದ ಕಲಾವಿದರಿಂದ ಮಾನಿಷಾದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
Comments are closed.