ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪದ ಕುಗ್ರಾಮವೊಂದರ ವಿದ್ಯಾರ್ಥಿ ಕನ್ನಡ ಮಾಧ್ಯಮದಲ್ಲಿ 625ಕ್ಕೆ 618 ಅಂಕ ಪಡೆಯುವ ಮೂಲಕ ಉಡುಪಿ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಕೊಲ್ಲೂರಿನ ಮಾರಣಕಟ್ಟೆ ಸಮೀಪದ ಹೊಸೂರು ಎಂಬಲ್ಲಿನ ಶಶಿಕಾಂತ್ ಎಂಬಾತನೇ ಸಾಧನೆ ಮಾಡಿದ ವಿದ್ಯಾರ್ಥಿ. ಈತ ಕೊಲ್ಲೂರು ಶ್ರೀ ಮೂಕಾಂಬಿಕಾ ಫ್ರೌಢಶಾಲೆ ಹೊಸೂರು ಇಲ್ಲಿನ ವಿದ್ಯಾರ್ಥಿ.
ಬಡತನದಲ್ಲಿ ಓದಿಸಿದ್ರು:
ಶಶಿಕಾಂತ ತೀರಾ ಬಡ ಕುಟುಂಬದಲ್ಲಿ ಜನಿಸಿದವನು. ಈತನ ತಂದೆ ಗೋಪಾಲ ಅವರು ಬೆಂಗಳೂರಿನಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು ತಾಯಿ ಶಾರದಾ ಹೊಸೂರಿನ ಮನೆಯಲ್ಲಿ ಬೀಡಿ ಕಟ್ಟಿ ಜೀವನ ನಿರ್ವಹಣೆಗಾಗಿ ದುಡಿಯುತ್ತಾರೆ. ಕಡುಬಡತನವಿದ್ದರೂ ಕೂಡ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಇರಾದೆ ಈ ಪೋಷಕರದ್ದು.
ಶಾಲೆಗೆ ಕಾಡಿನ ಹಾದಿಯಲ್ಲಿ ನಡೆದು ಬರಬೇಕು…
ಇನ್ನು ಶಶಿಕಾಂತ ಓದುತ್ತಿರುವ ಶಾಲೆಗೆ ಆತನ ಮನೆ ಹೊಸೂರಿನ ಕಾನಬೇರು ಎಂಬಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ನಡೆದು ಸಾಗಬೇಕು. ದುರ್ಗಮ ಹಾದಿಯಲ್ಲಿ ಈತ ನಿತ್ಯ ತನ್ನ ಸ್ನೇಹಿತರೊಂದಿಗೆ ಶಾಲೆಗೆ ಬರುತ್ತಿದ್ದ.
ಟ್ಯೂಷನ್ ಹೋಗಿಲ್ಲ..
ಶಶಿಕಾಂತ್ ಟ್ಯೂಷನ್ ತರಬೇತಿಗೆ ಹೋಗಿಲ್ಲ. ತರಗತಿಯಲ್ಲಿ ಪಾಠವನ್ನು ಏಕಾಗ್ರತೆಯಿಂದ ಆಲಿಸಿ ಮನನ ಮಾಡಿಕೊಳ್ಳುತ್ತಿದ್ದ. ಅಂದಿನ ಪಠ್ಯ ಚಟುವಟಿಕೆಯನ್ನು ಅಂದೇ ಮುಗಿಸುತ್ತಿದ್ದನಂತೆ. ಓದಿನಲ್ಲಿ ಮುಂದಿರುವ ಈತ ಚಿತ್ರಕಲೆ, ಭಾಷಣ ಹಾಗೂ ಪ್ರಬಂಧ ಮೊದಲಾದ ವಿಚಾರದಲ್ಲಿಯೂ ನಿಷ್ಣಾತನಾಗಿದ್ದಾನೆ ಎನ್ನುತ್ತಾರೆ ಶಾಲಾ ಮುಖ್ಯೋಪಧ್ಯಾಯ ಚಂದ್ರ ಶೆಟ್ಟಿ.
( ಶಾಲಾ ಮುಖ್ಯೋಪಧ್ಯಾಯ ಚಂದ್ರ ಶೆಟ್ಟಿ)
ವಿಜ್ಞಾನ ವಿಭಾಗ ಅಂದರೇ ತುಂಬಾ ಇಷ್ಟ. ಮುಂದೆ ಪಿಯುಸಿಯಲ್ಲಿ ಪಿ.ಸಿ.ಎಂ.ಇ. ಅಧ್ಯಯನ ಮಾಡಿ ಟೆಕ್ನಿಕಲ್ ಕೋರ್ಸ್ ಮಾಡುವಾಸೆ ಎನ್ನುತ್ತಾನೆ ಶಶಿಕಾಂತ.
ತೀರಾ ಬಡತನದಲ್ಲಿರುವ ಶಶಿಕಾಂತನ ಮುಂದಿನ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳು ಉಚಿತ ಸೀಟು ನೀಡುವ ಮೂಲಕ ಈ ಪ್ರತಿಭೆಗೆ ಪ್ರೋತ್ಸಾಹ ನೀಡಿದಲ್ಲಿ ಆತ ಇನ್ನಷ್ಟು ಸಾಧನೆ ಮಾಡಬಲ್ಲ.
Comments are closed.