ಉಡುಪಿ: ಜಿಲ್ಲಾದ್ಯಂತ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಗುಡುಗು-ಸಿಡಿಲು ಸಹಿತ ಬಾರೀ ಗಾಳಿ ಮಳೆಯಾಗಿದ್ದು ಹಲವೆಡೆ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಉಡುಪಿ ವರದಿ:
ಉಡುಪಿಯಲ್ಲಿ ಇಂದು (ಭಾನುವಾರ)ಬೆಳಗ್ಗಿನ ಜಾವ ಬೀಸಿದ ಭಾರೀ ಗಾಳಿಗೆ ಜಿಲ್ಲೆಯ ಹಾವಂಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಾರ್ತಿಬೈಲು ಎಂಬಲ್ಲಿ ಮನೆಗೆ ಮರ ಬಿದ್ದಿದ್ದು ಮನೆ ಬಾಗಶ: ಹಾನಿಗೆ ಒಳಗಾಗಿದೆ. ಗೋದು ಪೂಜಾರ್ತಿ ಅವರಿಗೆ ಸೇರಿದ ಮನೆ ಇದಾಗಿದ್ದು ಬೆಳಗಿನ ಜಾವ 3 ರಿಂದ 6 ಗಂಟೆಯವರೆಗೆ ಭಾರೀ ಗಾಳಿ ಮಳೆ ಬೀಸಿದ್ದು ಮನೆಯ ಎದುರಿರುವ ಮರ ಕಿತ್ತು ಮನೆಗೆ ಬಿದ್ದಿದೆ. ಈ ಘಟನೆಯಿಂದ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಗೆ ಅಧಿಕಾರಿಗಳು, ಶಾಸಕ ಪ್ರಮೋದ್ ಮದ್ವರಾಜ್ ಭೇಟಿ ನೀಡಿದ್ದಾರೆ. ಉಡುಪಿ ವ್ಯಾಪ್ತಿಯ ವಿವಿದೆಡೆ ಮರಗಳು ಉರುಳಿ ಬಿದ್ದ ಘಟನೆ ವರದಿಯಾಗಿದೆ.
ಕುಂದಾಪುರ ವರದಿ:
ಕುಂದಾಪುರ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದಲೇ ಬಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿತ್ತು. ಅಲ್ಲದೇ ಭಾನುವಾರ ಬೆಳಿಗ್ಗೆ ಸಿಡಿಲು, ಗಾಳಿ ಸಹಿತ ಬಾರೀ ಮಳೆಯಾಗಿದ್ದು ಈ ವೇಳೆ ಹಲವು ಮನೆಗಳಿಗೆ ಹಾನಿಯಾಗಿದೆ. ಬಹುತೇಕ ಸಾಲಿಗ್ರಾಮ, ಕೋಟ, ಗಿಳಿಯಾರು, ಕುಂದಾಪುರದ ಗೋಪಾಡಿ, ಕಟೆರೆ, ಕಾಳಾವರ, ಅಸೋಡು, ಕೆದೂರು, ಬೇಳೂರು ಪ್ರದೇಶದಲ್ಲಿ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸಾಲಿಗ್ರಾಮದ ಚರೋಳಿಬೆಟ್ಟು ಎಂಬಲ್ಲಿನ ನಂದಿ ಎನ್ನುವವರ ಮನೆ ಮೇಲೆ ಬೆಳಿಗ್ಗೆನ ಜಾವ ಮರ ಬಿದ್ದಿದ್ದು ತಗಡಿನ ಶೀಟುಗಳು, ಹಂಚು, ಮರದ ಪಕ್ಕಾಸೆ ಸೇರಿದಂತೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮರ ಬಿದ್ದ ಶಬ್ದಕ್ಕೆ ಅಂಜಿ ಮನೆಮಂದಿ ಹೊರಗೆ ಓಡಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಸಿಡಿಲಿಗೆ ಮನೆಯ ಟಿವಿ ಹಾಗೂ ವಿದ್ಯುತ್ ಉಪಕರಣಗಳು ಹನಿಯಾಗಿದೆ. ಗಾಳಿ ಪರಿಣಾಮ ಮನೆ ಎದುರಿನ ಹಲವು ಬಾಳೆ ಗಿಡಗಳು ಧರೆಗುಳಿದೆ.
ಇನ್ನು ಸಾಲಿಗ್ರಾಮ ಭಾಗದಲ್ಲಿ ಹಲವೆಡೆ ತೆಂಗಿನ ಮರಗಳು ಸೇರಿದಂತೆ ದೊಡ್ಡದೊಡ್ಡ ಗಾತ್ರದ ಮರಗಳು ಧರೆಗುರುಳಿದೆ. ಹಲವು ಭಾಗದಲ್ಲಿ ರಸ್ತೆ ಮೇಲೆಯೇ ಬ್ರಹತ್ ಮರಗಳುರುಳಿದ ಪರಿಣಾಮ ರಸ್ತೆ ಸಂಚಾರಕ್ಕೂ ತೊಡಕುಂಟಾಗಿದೆ. ಇನ್ನು ಗಿಳಿಯಾರು ಭಾಗದಲ್ಲಿಯೂ ಹಲವು ಮನೆಗಳಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭಿಸಿದೆ. ಇನ್ನು ಸಾಲಿಗ್ರಾಮ, ಕೋಟ ಭಾಗದಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಗೋಪಾಡಿಯ ಕರಾವಳಿ ಭಾಗದಿಂದ ಬೀಸಿದ ಬಾರೀ ಗಾಳಿಯಿಂದಗಿ ಹಲವು ತೆಂಗಿನ ಮರಗಳು ಹಾಗೂ ಬ್ರಹತ್ ಗಾತ್ರದ ಮರಗಳು ಧರೆಗುರುಳಿದೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ. ಹಲವೆಡೆ ಮನೆಗಳಿಗೂ ಹಾನಿಯಾಗಿದೆ. ಇನ್ನು ಬೀಜಾಡಿ, ಗೋಪಾಡಿ, ಕುಂಭಾಸಿ ಪ್ರದೇಶದಲ್ಲಿ ಸಿಡಿಲಿನಿಂದಾಗಿ ವಿದ್ಯುತ್ ಉಪಕರಣಗಳು ಹಾನಿಯಾದ ಬಗ್ಗೆ ವರದಿಯಾಗಿದೆ.
ವರದಿ- ಯೋಗೀಶ್ ಕುಂಭಾಸಿ