ಮಂಗಳೂರು : ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿ ನಮೋ ಬ್ರಿಗೇಡ್ನ ಮುಖಂಡ ನರೇಶ್ ಶೆಣೈ ಆಪ್ತ ಹಾಗೂ ಸ್ವಾಮೀಜಿಯೊಬ್ಬರ ಸಹಾಯಕ ಎನ್ನಲಾದ ವಿಶ್ವನಾಥ ಭಟ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕೊಚ್ಚಿ ಮೂಲದ ವಿಶ್ವನಾಥ ಭಟ್ ಎಂಬಾತನನ್ನು ಪೊಲೀಸರು ಕಾರ್ಕಳದಿಂದ ವಶಕ್ಕೆ ಪಡೆದಿದ್ದಾರೆ. ಈತ ಸ್ವಾಮೀಜಿಯೋರ್ವರ ಸಹಾಯಕ ಎನ್ನಲಾಗಿದ್ದು, ಸ್ವಾಮೀಜಿಯರೊಂದಿಗೆ ಕಾರ್ಕಳಕ್ಕೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ.ಬಾಳಿಗಾ ಅವರನ್ನು ಅವರ ನಿವಾಸದ ಬಳಿಯಲ್ಲೇ ದುಷ್ಕರ್ಮಿಗಳು ಮಾರ್ಚ್ 21 ರಂದು ಕೊಲೆ ಮಾಡಿದ್ದರು. ಘಟನೆ ಬಳಿಕ ಶಂಕಿತ ಆರೋಪಿ ನರೇಶ್ ಶೆಣೈ ತಲೆಮರೆಸಿಕೊಂಡಿದ್ದರು. ವಿಚಾರಣೆಗಾಗಿ ಶೆಣೈ ಪೊಲೀಸರಿಗೆ ಬೇಕಾಗಿದ್ದು, ಆತನನ್ನು ಪತ್ತೆ ಹಚ್ಚಲು ಈವರೆಗೂ ಸಾಧ್ಯವಾಗಿಲ್ಲ. ಆದರೆ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಬಂಧಿಸಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ನರೇಶ್ ಶೆಣೈನ ಆಪ್ತ ಎನ್ನಲಾದ ಕೇರಳ ಮೂಲದ ವಿಶ್ವನಾಥ ಭಟ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ನರೇಶ್ ಶೆಣೈಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ನರೇಶ್ ಶೆಣೈಯ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಲು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ..
ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ನ ನರೇಶ್ ಶೆಣೈಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.