ಉಡುಪಿ: ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ಸಮೀಪದ ಕೊಯ್ಕೂರು ಎಂಬಲ್ಲಿ ಮಂಗಳವಾರ ಸಂಜೆಯ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಮಾರು 7-8 ಎಕರೆ ಕೃಷಿಭೂಮಿ ಪ್ರದೇಶ ಸುಟ್ಟು ಕರಕಲಾದ ಘಟನೆ ವರದಿಯಾಗಿದೆ.
ಮಣೂರು ಸಮೀಪದ ಬೇಳುರು ರಸ್ತೆಯಲ್ಲಿರುವ ಮೂಡುಗಿಳಿಯಾರು ಎಂಬಲ್ಲಿ ಈ ಘಟನೆ ನಡೆದಿದ್ದು ಬಹುತೇಕ ಕೃಷಿ ಭೂಮಿಗಳಿಗೆ ಬೆಂಕಿ ತಾಗಿದೆ. ಅಲ್ಲದೇ ಈ ಬೆಂಕಿ ತಕ್ಷಣವೇ ವ್ಯಾಪಿಸಿ ಅಕ್ಕಪಕ್ಕದ ಗಿಡಗಳು, ಮರಮಟ್ಟುಗಳಿಗೆ ತಗುಲಿ ಬೆಂಕಿ ಇನ್ನಷ್ಟು ಹೆಚ್ಚಿದೆ. ಸಂಜೆ 5 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ರಾತ್ರಿ 8.30ರವರೆಗೂ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಇದೇ ವೇಳೆ ತಾಳೆ ಮರವೊಂದಕ್ಕೆ ಬೆಂಕಿ ಹಬ್ಬಿ ಸಂಪೂರ್ಣ ಮರ ಹೊತ್ತಿ ಉರಿದ ಘಟನೆಯೂ ನಡೆಯಿತು.
ಮಣೂರು ಕೊಯ್ಕೂರು ಸಮೀಪ ಬೆಂಕಿ ಕಾಣಿಸಿಕೊಂಡು, ಆ ಬೆಂಕಿ ಹಬ್ಬುತ್ತಾ ಮೂಡುಗಿಳಿಯಾರಿನ ಹಂದಿಕೇರಿ ಮನೆ, ದ್ಯಾವಸ ಮನೆಯವರೆಗೆ ವ್ಯಾಪಿಸಿ ಸುಮಾರು 7-8 ಎಕರೆ ಭೂಮಿಯನ್ನು ಸುಟ್ಟು ಕರಕಲಾಗಿಸಿದೆ. ಸ್ಥಳೀಯರು ಕೃಷಿ ಮಾಡದೇ ಹಾಗೆಯೇ ಬಿಟ್ಟ ಜಾಗದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರಬಹುದೆಂದು ಅನುಮಾನಿಸಲಾಗಿದೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಇನ್ನು ಬೆಂಕಿ ಬಿದ್ದಿರುವ ಪ್ರದೇಶ ಕೃಷಿಭೂಮಿಯಾಗಿದ್ದು ಗದ್ದೆಯಲ್ಲಿ ಯವುದೇ ಬೆಳೆಗಳ್ ಇಲ್ಲದೇ ಖಾಲಿಯಿದ್ದ ಕಾರಣ ಹೆಚ್ಚಿನ ನಷ್ಟ ಸಂಭವಿಸಿಲ್ಲ. ಅಲ್ಲದೇ ಸ್ಥಳಿಯರು ಮತ್ತು ಅಗ್ನಿಶಾಮಕದಳದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಕಿ ಹತೋಟಿಗೆ ತರುವ ಕೆಲಸ ನಡೆಯಿತು.
ಬೆಂಕಿ ಬಿದ್ದ ಅನತಿ ದೂರದಲ್ಲಿಯೇ ಸಾಲುಸಾಲು ಮನೆಗಳು ಇದ್ದಿದ್ದು ಅಕ್ಕಪಕ್ಕದ ಮನೆಗೂ ಬೆಂಕಿ ವ್ಯಾಪಿಸುವ ಸಂದರ್ಭವಿದ್ದಿತ್ತು ಆದರೇ ಸ್ಥಳೀಯರು ಹಾಗೂ ಆಗ್ನಿಶಾಮಕದಳದವರು ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿ ಮುಂದುವರಿಯದಂತೆ ನಿಯಂತ್ರಣಕ್ಕೆ ತಂದರು.
ಸ್ಥಳೀಯ ಮುಖಂಡರಾದ ಪ್ರವೀಣ ಕುಮಾರ್ ಶೆಟ್ಟಿ ಕೊಯ್ಕಾಡಿ ಮೊದಲಾದವರು ಈ ಸಂದರ್ಭ ಇದ್ದರು. ಘಟನಾ ಸ್ಥಳಕ್ಕೆ ಕೋಟ ಎಸ್.ಐ. ಕಬ್ಬಾಳರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರ- ಯೋಗೀಶ್ ಕುಂಭಾಸಿ