ಮಂಗಳೂರು, ಮೇ 3: ಜಿಲ್ಲೆಯ ಮುಸ್ಲಿಂ ಸಮುದಾಯದ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮೃತಪಟ್ಟ ಸಂದರ್ಭ ಜೀವನ ನಿರ್ವಹಣೆಗಾಗಿ ಸಂಬಂಧಪಟ್ಟ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ನೂತನ ಸಂಘವೊಂದು ಅಸ್ತಿತ್ವಕ್ಕೆ ಬಂದಿದೆ.
ಸೋಮವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮುಸ್ಲಿಂ ಅಸೋಸಿಯೇಶನ್ (ಡಿಕೆಎಂಎ) ಎಂಬ ಹೆಸರಿನ ನೂತನ ಸಂಘಕ್ಕೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಚಾಲನೆ ನೀಡಿದರು.ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಇದೊಂದು ಪ್ರಯೋಜನಕಾರಿ ಯೋಜನೆಯಾಗಿದೆ. ಈ ಯೋಜನೆಯನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಗೊಳಿಸಲಾದ ಶಾದಿ ಭಾಗ್ಯ ಯೋಜನೆಯಂತೆ ಇದನ್ನು ಸರಕಾರಿ ಯೋಜನೆಯನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಹಾಜಿ ಮಾತನಾಡಿ, ಡಿಕೆಎಂಎ ಮೂಲಕ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಫಲಾನುಭವಿ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯಧನವನ್ನು ವಿತರಿಸಲಾಗುವುದು ಎಂದು ಹೇಳಿದರು.
200 ಮಂದಿ ದಾನಿ ಸದಸ್ಯರನ್ನು ಒಗ್ಗೂಡಿಸಿ, ಅಸೋಸಿಯೇಶನ್ನಲ್ಲಿ ಫಲಾನುಭವಿಗಳಾಗಿ ಗುರುತಿಸಿಕೊಂಡಿರುವ ಕುಟುಂಬಗಳ ಯಜಮಾನ ಮೃತಪಟ್ಟ ಸಂದರ್ಭ ಈ ದಾನಿ ಸದಸ್ಯರಿಂದ ತಲಾ 1000 ರೂ.ನಂತೆ ಸಂಗ್ರಹಿಸಿ ಸಂಬಂಧಪಟ್ಟ ಕುಟುಂಬಕ್ಕೆ ವಿತರಿಸಲಾಗುವುದು ಎಂದು ರಶೀದ್ ಹಾಜಿ ತಿಳಿಸಿದರು.
ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ. ಘೋಷಣೆ:
ತೊಕ್ಕೊಟ್ಟು ಒಳಪೇಟೆ ಬಳಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಅಮಾಯಕ ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ.ಗಳನ್ನು ಅಸೋಸಿಯೇಶನ್ ವತಿಯಿಂದ ನೀಡುವುದಾಗಿ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಹಾಜಿ ಘೋಷಿಸಿದರು.
ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್ನ ಫಲಾನುಭವಿಗಳಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದರೂ, ಮಾನವೀಯ ನೆಲೆಯಲ್ಲಿ ಹಾಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಯೋಜನೆಗೆ ಚಾಲನೆ ನೀಡುತ್ತಿರುವ ಸಂದರ್ಭದಲ್ಲಿ ಈ ಸಹಾಯ ಹಸ್ತಕ್ಕೆ ಮುಂದಾಗಿರುವುದಾಗಿ ಅವರು ಹೇಳಿದರು.
ಶಾಸಕ ಮೊಯ್ದಿನ್ ಬಾವಾ, ಮಾಜಿ ಸಚಿವ ಬಿ.ಎ. ಮೊಯ್ದಿನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.