(Exclusive) – ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಎಪ್ರಿಲ್.22 : ಕಂಠಪೂರ್ತಿ ಸಾರಾಯಿ ಕುಡಿದು ಮದ್ಯಪಾನದ ಅಮಲು ತಲೇಗೇರಿದ ಬಳಿಕ ಕುಡುಕರು ತಮ್ಮ ಅವಂತಾರಗಳಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದನ್ನು ತಾವು ಕಂಡಿದ್ದಿರಿ. ಆದರೆ ಇಲ್ಲೊಬ್ಬ ಕುಡುಕ ತನ್ನ ವಿಚಿತ್ರ ಹವ್ಯಾಸದಿಂದ ತನ್ನ ಜೀವಕ್ಕೆ ಕುತ್ತು ಬರುವಂತಹ ರೀತಿಯ ಅವಂತಾರ ಸೃಷ್ಟಿಸಿ ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ.
ಹೌದು.. ಇಲ್ಲೊಬ್ಬ ಯುವಕ ಕಂಠಪೂರ್ತಿ ಸಾರಾಯಿ ಕುಡಿದು ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಉರ್ವಾಸ್ಟೋರ್ ಸಮೀಪದ ಬಿಂಬಿಸ್ ಸೂಪರ್ ಮಾರುಕಟ್ಟೆ ಮುಂಭಾಗದ ರಸ್ತೆ ಬದಿಯಿರುವ ಮಾವಿನ ಮರ ಹತ್ತಿ ಮಾವಿನ ಕಾಯಿ ಕೀಳಲು ಯತ್ನಿಸಿದಾಗ ಮರದ ಕೊಂಬೆ ಸಮೇತಾ ಸುಮಾರು 50 ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾನೆ.
ಅಷ್ಟು ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಈ ವ್ಯಕ್ತಿಯ ತಲೆ, ಬೆನ್ನು ಹಾಗೂ ಕೈಗೆ ಬಲವಾದ ಏಟುಗಳಾಗಿದ್ದು, ಕೆಳಗೆ ಬಿದ್ದ ತಕ್ಷಣ ಈತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಈ ಸಂದರ್ಭ ಸ್ಥಳದಲ್ಲಿ ಈ ವ್ಯಕ್ತಿಯ ಪರಿಚಯಸ್ಥರು ಯಾರೂ ಇಲ್ಲದಿದ್ದ ಕಾರಣ ಈತನನ್ನು ಆಸ್ಪತ್ರೆಗೆ ಸೇರಿಸಲು ಸಾರ್ವಜನಿಕರು ಯಾರೂ ಮುಂದೆ ಬರಲು ಸಿದ್ದರಿರಲಿಲ್ಲ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪಿಸಿಆರ್ ಮೂಲಕ ಸ್ಥಳಕ್ಕೆ ಬಂದ ಉರ್ವಾ ಠಾಣೆಯ ಇಬ್ಬರು ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಆಟೋ ರಿಕ್ಷಾ ಮೂಲಕ ಈ ವ್ಯಕ್ತಿಯನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದರು.
ನೆರವಿಗೆ ಬಾರದ ಅಂಬುಲೆನ್ಸ್..
ಈ ವ್ಯಕ್ತಿ ಮರದಿಂದ ಬಿದ್ದು ಸುಮಾರು 25 ನಿಮಿಷ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ… ಯಾವೂದೇ ಅಂಬುಲೆನ್ಸ್ ಆಗಲಿ ತಕ್ಷಣ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದ ಬೈಕ್ ಅಂಬುಲೆನ್ಸ್ ಆಗಲಿ ಸ್ಥಳಕ್ಕೆ ಬರಲಿಲ್ಲ. ಅಲ್ಲಿ ಸೇರಿದ್ದ ಹಲವಾರು ವ್ಯಕ್ತಿಗಳು ಅಂಬುಲೆನ್ಸ್ಗಾಗಿ ಎಲ್ಲಾ ಕಡೆ ದೂರವಾಣಿ ಕರೆ ಮಾಡಿದರೂ ಸಿಟಿಯಲ್ಲಿ ಅಂಬುಲೆನ್ಸ್ ಕೊರತೆ ಇದೆ. ನೀವು ಬಜಪೆಯಿಂದ ಟ್ರೈ ಮಾಡಿ, ಅಥವಾ ಇನ್ನೊಂದು ಕಡೆ ಟ್ರೈ ಮಾಡಿ ಎಂಬ ಉತ್ತರ ಅತ್ತ ಕಡೆಗಳಿಂದ ಬರುತ್ತಿತ್ತು. ಪೊಲೀಸರು ಆಗಮಿಸಿದ ಬಳಿಕ ಅವರೂ ಅಂಬುಲೆನ್ಸ್ಗಾಗಿ ಕರೆ ಮಾಡುವುದು ಕಂಡು ಬಂತು. ಆದರೆ ಅಂಬುಲೆನ್ಸ್ ಬರುವ ಲಕ್ಷಣಗಳು ಕಾಣಿಸಲಿಲ್ಲ. ಪೊಲೀಸರಿಗೂ ಅಂಬುಲೆನ್ಸ್ ಲಭಿಸದ ಹಿನ್ನೆಲೆಯಲ್ಲಿ ಬಳಿಕ ಈ ವ್ಯಕ್ತಿಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಈ ಯೋಜನೆಗಳು ಎಷ್ಟು ಸಮರ್ಪಕವಾಗಿ ಕಾರ್ಯನಿರ್ವಾಹಿಸುತ್ತಿದೆ ಎಂದು ಇಂತಹ ಘಟನೆಗಳು ನಡೆದಾಗ ತಿಳಿದು ಬರುತ್ತಿದೆ. ಅಂದರೆ ಸರ್ಕಾರಿ ಜಾರಿಗೆ ತರುತ್ತಿರುವ ಯೋಜನೆಗಳು ಜನಸಾಮಾನ್ಯರ ಪಾಲಿಗೆ ಇಲ್ಲ ಎಂಬುವುದು ಇದರಿಂದ ಸಾಭಿತಾಗುತ್ತಿದೆ. ಸಾಮಾನ್ಯ ಜನರ ನೆರವಿಗೆ ಬಾರಾದ ಯೋಜನೆಗಳು ಇದ್ದರೆಷ್ಟು.. ಬಿಟ್ಟರೆಷ್ಟು… ಈ ಬಗ್ಗೆ ಆರೋಗ್ಯ ಸಚಿವರು ಏನೆನ್ನುತ್ತಾರೆ ಎಂದು ಅಲ್ಲಿ ಸೇರಿದ್ದ ಜನರು ಗೊಣಗುವುದು ಕಂಡು ಬಂತು.
ಪ್ರಾಣಕ್ಕೆ ಕುತ್ತು ತರುವ ವಿಚಿತ್ರ ಹವ್ಯಾಸ :
ಕೋಡಿಕಲ್ ನಿವಾಸಿ ಎನ್ನಲಾದ ಸುಮಾರು 38 ಪ್ರಾಯದ ಯುವಕನಿಗೆ ವಿಪರಿತ ಸಾರಾಯಿ ಕುಡಿಯುವ ಚಟ. ಆದರೆ ಕುಡಿಯಲು ಹಣ ಬೇಕಲ್ಲವೇ… ಅದಕ್ಕೆ ಈತ ಏನು ಮಾಡುತ್ತಿದ್ದ ಗೊತ್ತೆ. ಯಾವೂದೇ ಮರವೇರುವಲ್ಲಿ ಅತ್ಯಂತ ನಿಪುಣನಾಗಿರುವ ಈತ ಕುಡಿಯಲು ಹಣದ ಅಗತ್ಯ ಬಿದ್ದಾಗೆಲ್ಲಾ ನಗರದ ರಸ್ತೆ ಬಳಿಯಿರುವ ಯಾವೂದಾದರೂ ಮಾವಿನ ಮರವನ್ನು ಹತ್ತಿ ಅದರಿಂದ ಮಾವಿನ ಕಾಯಿ ಕೀಳಿ ಅದನ್ನು ಮಾರಿ ಬಂದ ಹಣದಲ್ಲಿ ಸಾರಾಯಿ ಕುಡಿಯುತ್ತಿದ್ದ. ಅಷ್ಟೇ ಆದರೆ ಪರವಾಗಿಲ್ಲ. ಕಂಠಪೂರ್ತಿ ಸಾರಾಯಿ ಕುಡಿದ ಬಳಿಕ ಮತ್ತೆ ಸಾರಾಯಿ ಬೇಕೆಂದು ಅನಿಸಿದಾಗ ಕುಡಿದ ಮತ್ತಿನಲ್ಲಿಯೇ ಈ ರೀತಿ ಮರ ಹತ್ತಿ ಮತ್ತೆ ಮಾವಿನ ಕಾಯಿ ಕೀಳುತ್ತಾನೆ.
ಮರ ಹತ್ತುವುದರಲ್ಲಿ ತುಂಬಾ ಅನುಭವವಿರುವ ಈತ ಈ ರೀತಿ ದಿನನಿತ್ಯಾ ಕುಡಿದ ಮೇಲು ಮರಹತ್ತಿ ಕಾಯಿ ಕೀಳುತ್ತಾನೆ. ಆದರೆ ಹೀಗೆ ಈತ ಮರದಿಂದ ಬಿದ್ದದ್ದು ಮಾತ್ರ ಇದೇ ಮೊದಲ ಸಲ ಎಂದು ಈತನ ಗ್ಲಾಸ್ ಮೆಟ್ ಒಬ್ಬರು ತಿಳಿಸಿದ್ದಾರೆ.
Exclusive – ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್