ಸುಬ್ರಹ್ಮಣ್ಯ,ಎ.22: ಮಳೆಗಳ ನಾಡು ಎಂಬ ಹೆಸರು ಹೊಂದಿರುವ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲೂ ಈ ಬಾರಿ ನೀರಿಗಾಗಿ ಪರಿತಪಿಸಬೇಕಾಯಿತು. ದೇವಸ್ಥಾನದ ಬಾವಿಯಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಬುಧವಾರದಿಂದ ದೇಗುಲದಲ್ಲಿ ಭಕ್ತರಿಗೆ ತೀರ್ಥ ಬಾಟಲಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ದೇಗುಲದಲ್ಲಿ ದೇವರಿಗೆ ಅಭಿಷೇಕ ಸಲ್ಲಿಸಲು ಹಾಗೂ ಭಕ್ತರಿಗೆ ತೀರ್ಥ ರೂಪದಲ್ಲಿ ತೀರ್ಥ ಪ್ರಸಾದ ವಿತರಿಸಲು ದೇವಸ್ಥಾನದ ಬಾವಿಯ ನೀರನ್ನು ಬಳಸಲಾಗುತ್ತದೆ. ಬಾವಿಯ ಜಲ ಹೊರತುಪಡಿಸಿ ಬೇರೆ ಯಾವುದೇ ಜಲವನ್ನು ಇದಕ್ಕೆ ಬಳಸುವಂತಿಲ್ಲ. ದೇವಸ್ಥಾನದ ನಿತ್ಯ ಬಳಕೆಯ ಬಾವಿ ಬತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ.
ದೇಗುಲದ ಬಾವಿಯಲ್ಲಿ ಈಗ ಲಭ್ಯವಿರುವ ಅಲ್ಪಪ್ರಮಾಣದ ಜಲವನ್ನು ಶ್ರೀ ದೇವರಿಗೆ ಅಭಿಷೇಕ ಮತ್ತು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಕೈಗೆ ತೀರ್ಥವಾಗಿ ನೀಡಲು ಮಾತ್ರ ಬಳಸಲಾಗುತ್ತದೆ.
ಕಳೆದ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಪರ್ಜನ್ಯ ಜಪ ಮಾಡಲಾಗಿತ್ತು. ವಿಶೇಷ ಎಂದರೆ ಅದೇ ದಿನ ರಾತ್ರಿ ಸಾಧಾರಣ ಮಳೆಯಾಗಿತ್ತು.
2,000 ಬಾಟಲಿಗೆ ನಿತ್ಯ ಬೇಡಿಕೆ
ಕ್ಷೇತ್ರದಲ್ಲಿ ದಿನವೊಂದಕ್ಕೆ ಸುಮಾರು 2,000 ತೀರ್ಥ ಬಾಟಲಿ ವಿತರಣೆಯಾಗುತ್ತಿದೆ. ವಿಶೇಷ, ಪರ್ವ ದಿನಗಳಲ್ಲಿ 3,000ದಿಂದ 4,000 ತನಕವೂ ತೀರ್ಥ ಬಾಟಲಿಗಳು ವಿತರಣೆಯಾಗುತ್ತಿವೆ.