ಬಸ್ರೂರು ರಥಬೀದಿ ಫ್ರೆಂಡ್ಸ್ ದಶಮಾನೋತ್ಸವ ಸಮಾರಂಭದಲ್ಲಿ ತಾರೆಯರ ಮೆರುಗು
ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ರಥಬೀದಿ ಫ್ರೆಂಡ್ಸ್ ಇವರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಚಲನಚಿತ್ರ ನಟನಟಿಯರ ಹಾಗೂ ಕಿರುತೆರೆ ಕಲಾವಿದರ ದಂಡು ನೆರೆದಿತ್ತು. ಈ ಬಗ್ಗೆಗಿನ ಒಂದು ವರದಿಯಿಲ್ಲಿದೆ.
ನಿರಂತರವಾಗಿ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿರುವ ರಥಬೀದಿ ಫ್ರೆಂಡ್ಸ್ ಬಸ್ರೂರು ಇದರ ದಶಮಾನೋತ್ಸವ ಉದ್ಘಾಟನಾ ಸಮಾರಂಭವು ಗುರುವಾರ ಸಂಜೆ ಬಸ್ರೂರಿನ ರಥಬೀದಿ ವೇದಿಕೆಯಲ್ಲಿ ವೈಭವದಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದು ಖ್ಯಾತ ಉದ್ಯಮಿ ವಿ.ಕೆ. ಮೋಹನ್ ವಕ್ವಾಡಿ ಸಾರಥ್ಯದಲ್ಲಿ ಆಗಮಿಸಿದ ನಟ ತಿಲಕ್, ನಟಿ ಸಂಜನಾ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ, ಉದಯ ಕಾಮೆಡಿ ಖ್ಯಾತಿಯ ಹರೀಶ್, ಹಿರಿಯ ಕಲಾವಿದ ಬಾಲರಾಜ್, ವಿ.ಕೆ. ಗೋಪಾಲ್, ರುದ್ರೇ ಗೌಡ ಮಂಡ್ಯ, ಸುವರ್ಣ ವಾಹಿನಿಯ ಸೂಪರ್ ಜೋಡಿಯ ಕಲಾವಿದರು.
ಕಾಣೆ ಮೀನು ಫೆವರೆಟ್- ಸಂಜನಾ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲಿಯೂ ಕುಂದಾಪುರ ಭಾಗವೆಂದರೇ ತುಂಬಾ ಅಚುಮೆಚ್ಚು. ಇಲ್ಲಿನ ಕಾಣೆ ಮೀನು ನನ್ನ ಫೇವರೆಟ್ ಫುಡ್. ಕನಸಲ್ಲು ನನಗೆ ಮೀನು, ಸಿಗಡಿ, ನಾಟಿ ಕೋಳಿ ನೆನಪಾಗುತ್ತೆ. ಇಲಿಂದ ಬೆಂಗಳುರಿಗೆ ಹೋಗುವಾಗ ಚೀಲದಲ್ಲಿ ಮೀನು ಕೊಂಡು ಹೋಗುತ್ತೇವೆ. ಇಲ್ಲಿನ ವಾತಾವರಣ ಇಷ್ಟ. ಈ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ನಮ್ಮ ಧನ್ಯವಾದಗಳು.
ಕುಂದಾಪುರ ಜನ ಕನ್ನಡ ಉಳಿಸಿದ್ದಾರೆ-ಮಯೂರಿ
ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮಾತನಾಡಿ, ಕುಂದಾಪುರಕ್ಕೆ ಬರುವುದೆಂದರೇ ತುಂಬಾ ಇಷ್ಟ. ಮೀನು ತಿನ್ನದಿದ್ದರೂ ಕೂಡ ಮೀನು ತಿನ್ನುವವರನ್ನು ನೋಡಿ ಖುಷಿಪಡುವೆ. ಕುಂದಾಪುರ ಜನರು ಕನ್ನಡ ಉಳಿಸಿದ್ದಾರೆ. ಇಲ್ಲಿನ ಜನರ ಮುಗ್ಧತೆ, ಕಲಾವಿದರಿಗೆ ನೀಡುವ ಗೌರವ ನಿಜಕ್ಕೂ ಗ್ರೇಟ್.
ನಟ ತಿಲಕ್ ಮಾತನಾಡಿ, ನಾನು ನಟಿಸಿದ ಉಗ್ರಂ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಇದೇ ಭಾಗದವರಾದ ಕಾರಣ ಬಸ್ರೂರು ಬಗ್ಗೆ ಕೇಳಿ ತಿಳಿಸಿದಿದ್ದೇನೆ. ಇಲ್ಲಿನವರ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಕನ್ನಡ ಚಿತ್ರಗಳನ್ನು ವೀಕ್ಷಿಸಿ ಹರಸಿ-ಹಾರೈಸಿ ಎಂದರು.
ಬಸ್ರೂರು ರಥಬೀದಿ ಪ್ರೆಂಡ್ಸ್ ಇದರ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ನೆರವೇರಿಸಿ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ರಥಬೀದಿ ಪ್ರೆಂಡ್ಸ್ ರಾಷ್ಟ್ರಪ್ರೇಮವನ್ನು ಸಾರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಡೆಂಟಲ್ ಲ್ಯಾಬ್ ಮತ್ತು ಕ್ಲಿನಿಕ್ ಬೆಂಗಳೂರು ಇದರ ಗಣೇಶ್ ಪಡಿಯಾರ ಬಸ್ರೂರು, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಕೊಯ್ಕಾಡಿ, ಚಿತ್ರ ನಿರ್ದೇಶಕ ರವಿ ಬಸ್ರೂರು, ರಥಬೀದಿ ಫ್ರೆಂಡ್ಸ್ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ, ಗೌರವಾಧ್ಯಕ್ಷ ರಾಮಕಿಶನ್ ಹೆಗ್ಡೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪಡಿಯಾರ್, ಬಳ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ವೇದಮೂರ್ತಿ ಶ್ರೀಧರ್ ಉಡುಪ ಉಪಸ್ಥಿತರಿದರು.