ಮಂಗಳೂರು, ಎಪ್ರಿಲ್.21 : ಬಜ್ಪೆ ವಿಮಾನ ನಿಲ್ದಾಣದ ಬಳಿ ಸುಮಾರು 11 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ “ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ನಿರ್ಮಿಸಿರುವ ನಿರ್ಗಮನ ರಸ್ತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಉದ್ಘಾಟಿಸಿದರು.
ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಎತ್ತಿನಹೊಳೆ ಯೋಜನೆ ಎಂದರೆ ನದಿ ತಿರುವು ಯೋಜನೆ ಎಂಬ ತಪ್ಪು ತಿಳುವಳಿಕೆ ಇಲ್ಲಿನ ಜನತೆಯಲ್ಲಿದೆ. ಆದರೆ ಇಲ್ಲಿ 24 ಟಿಎಂಸಿ ನೀರು ಖಂಡಿತಾ ಇದೆ. ತಜ್ಞರ ವರದಿಯನ್ನು ಆಧರಿಸಿಯೇ ಇಂತಹ ನಿರ್ಧಾರ ಕೈಗೊಂಡಿದ್ದೇವೆ.ತ್ತಿನಹೊಳೆಯಲ್ಲಿ ಮಳೆ ಪ್ರವಾಹದಿಂದ ಸಂಗ್ರಹವಾದ ನೀರನ್ನು ಬಯಲು ಸೀಮೆಯ ಕೆರೆಗಳಿಗೆ ತುಂಬಿಸಲಾಗುವುದು. ಈ ಯೋಜನೆ ವಿಫಲವಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇನ್ನೂ ಎತ್ತಿನಹೊಳೆ ಯೋಜನೆಯನ್ನು ಆದಷ್ಟು ಬೇಗ ಮುಗಿಸುತ್ತೇವೆ. ಮಳೆಗಾಲದಲ್ಲಿ ಪ್ರವಾಹ ಬಂದಾಗ ಮಾತ್ರ ನೀರು ತಗೊಂಡು ಹೋಗುವುದು. ಹೋರಾಟಗಾರರಿಗೆ ಸರಿಯಾದ ಮಾಹಿತಿ ಇಲ್ಲ. ಈ ಯೋಜನೆಯಿಂದ ಯಾವುದೇ ಭಾದಕವಿಲ್ಲ ಅಂತಾ ಸಿಎಂ ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲದ ಹಾಗೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಈ ಸಂದರ್ಭ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ,ಶಾಸಕರಾದ ಜೆ.ಆರ್.ಲೋಬೋ, ಪ್ರಮೋದ್ ಮಧ್ವರಾಜ್, ಮೊಯ್ದಿನ್ ಬಾವಾ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ,ಮೇಯರ್ ಹರಿನಾಥ್ ಬೋಂದೇಲ್ ಮತ್ತಿತರು ಜತೆಗಿದ್ದರು.