ಉಡುಪಿ: ಕೆಲವು ತಿಂಗಳ ಹಿಂದೆ ಹಿರಿಯಡಕದಲ್ಲಿನ ಉಡುಪಿ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಮತ್ತು ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೨೦ ಪ್ರಕರಣಗಳಲ್ಲಿ ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿದ್ದ ಹಕ್ಕಿ ಪಿಕ್ಕಿ ಜನಾಂಗದ ಇರ್ವರು ಖತರ್ನಾಕ್ ಕಳ್ಳರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿದ್ದಾರೆ.
ಸೋಮವಾರದಂದು ಮುಂಜಾನೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕೊಮೆಗೆ ಹೋಗುವ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿನ ಹನುಮಾನ್ ರೈಸ್ ಮಿಲ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇರ್ವರು ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳನ್ನು ಕಂಡಾಕ್ಷಣ ಓಡಲು ಪ್ರಯತ್ನಿಸಿದವರನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಕಬ್ಬಿಣದ ರಾಡ್ ಮತ್ತು ಕಬ್ಬಿಣ ಕತ್ತರಿಸಲು ಬಳಸುವ ಎಕ್ಸೋ ಬ್ಲೇಡ್ ಪತ್ತೆಯಾಗಿತ್ತು.
ಇಬ್ಬರನ್ನು ವಿಚಾರಿಸಿದಾಗ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಹಾಸನ ಮೂಲದ ಕುಮಾರ್(23) ಮತ್ತು ಬಬ್ರುವಾಹನ ಅಲಿಯಾಸ್ ಅಶೋಕ ಎಂದು ತಿಳಿದು ಬಂದಿದೆ.
ಬಂಧಿಸಲ್ಪಟ್ಟವರು ಮಣಿಪಾಲ ಅತ್ರಾಡಿ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಹಾಸನ, ಬೈಂದೂರು, ಕುಶಾಲ ನಗರ ಮೊದಲಾದ ಪೋಲಿಸ್ ಠಾಣೆಯ ಹಳೆ ಅಪರಾಧಿಗಳಾಗಿದ್ದಾರೆ. ಅಲ್ಲದೇ ಎರಡು ಪ್ರಕರಣಗಳಲ್ಲಿ ಅಪರಾಧ ಮಾಡಿ ಪೋಲಿಸ್ ಬಂಧನದಿಂದ ತಲೆ ತಪ್ಪಿಸಿಕೊಂಡವರಾಗಿದ್ದಾರೆ. ಹೆಚ್ಚಾಗಿ ಮನೆ, ದೇವಸ್ಥಾನ ಶಾಲೆ ಹೀಗೆ ಅವಕಾಶ ಸಿಕ್ಕ ಕಡೆ ಕಳ್ಳತನ ನಡೆಸುವ ಇವರು ಹೆಚ್ಚಾಗಿ ರೈಲ್ವೇ ನಿಲ್ದಾಣ ಅಥವಾ ಬಸ್ ನಿಲ್ದಾಣದ ಬಳಿ ಟೆಂಟ್ ಹಾಕಿ, ಗುಜರಿ ಆರಿಸುವ ವೇಷದಲ್ಲಿ ಹಗಲಿಗೆ ಸುತ್ತಲಿನ ಸ್ಥಳಗಳಿಗೆ ತೆರಳಿ, ರಾತ್ರಿ ಹೊತ್ತು ಹೊಂಚು ಹಾಕಿ ಕಳ್ಳತನ ನಡೆಸಿ ಮಾಯವಾಗುತ್ತಿದ್ದರು ಎನ್ನಲಾಗಿದೆ.
ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಯಬೇಕಾಗಿದೆ.