ಕಾಸರಗೋಡು, ಏ.18 : ತಂದೆ, ತಾಯಿ ಸೇರಿದಂತೆ ಮನೆಯ ಐದು ಮಂದಿಯನ್ನು ಮಾರಕಾಸ್ತ್ರದಿಂದ ಕಡಿದು ಐ.ಟಿ. ಉದ್ಯೋಗಿಯೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದಿತ್ಯವಾರ ಮಧ್ಯಾಹ್ನ ಬದಿಯಡ್ಕ ಸಮೀಪದ ನೆಕ್ರಾಜೆಯಲ್ಲಿ ನಡೆದಿದೆ.
ನೆಕ್ರಾಜೆ ಚಾತಪ್ಪಾಡಿಯ ಅಶ್ವಿನ್ ಕಲ್ಲೂರಾಯ(22) ಆತ್ಮಹತ್ಯೆ ಮಾಡಿಕೊಂಡವರು. ಗಾಯಗೊಂಡ ತಂದೆ ಶ್ರೀಹರಿ(57), ತಾಯಿ ಲತಾ(52), ಸಹೋದರಿ ಸುಮಾ(33), ವನಜಾಕ್ಷಿ(50), ಸುಗುಣಮ್ಮ(80) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು.
ಕೃತ್ಯದ ಬಳಿಕ ನಾಪತ್ತೆಯಾಗಿದ್ದ ಅಶ್ವಿನ್ಗಾಗಿ ಶೋಧ ನಡೆಸಿದಾಗ ಮನೆಯ ತೋಟದ ಬಳಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರು ಕೂಡಲೇ ಈತನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದ. ಎರಡು ದಿನಗಳ ಹಿಂದೆ ಅಶ್ವಿನ್ ಮನೆಗೆ ಬಂದಿದ್ದರು. ಕೊಯಮುತ್ತೂರಿನಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದ ಇವರು ಹೆಚ್ಚಿನ ಸಮಯವನ್ನು ಹೈದರಾಬಾದ್ನಲ್ಲಿ ಕಳೆಯುತ್ತಿದ್ದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.