ಕುಂದಾಪುರ: ಮಗಳ ಮದುವೆಗೆ ಇನ್ನು ಹತ್ತು ದಿನಗಳು ಬಾಕಿ. ಆ ತಂದೆಯ ಮನಸ್ಸಲ್ಲಿ ಅದೆಷ್ಟೋ ಕನಸುಗಳು ಇದ್ದವು. ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಹಂಚಬೇಕು, ತನ್ನ ಜವಬ್ದಾರಿಯನ್ನು ಪರಿಪೂರ್ಣಗೊಳಿಸಬೇಕು ಎನ್ನುವ ಹಂಬಲ ಆ ಮನದಲ್ಲಿತ್ತು. ಆದರೇ ಆ ವಿಧಿಯೇ ಬೇರೆಯಾಗಿತ್ತು. ಹಗಲೆಲ್ಲಾ ಮದುವೆ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಆ ವ್ಯಕ್ತಿ ಸಂಜೆ ಊರಿನ ಮಾಸ್ತಿಕಟ್ಟೆಯಲ್ಲಿ ದೇವರಿಗೆ ದೀಪ ಹಚ್ಚಿ ವಾಪಾಸ್ಸು ಬರುವಾಗ ನಡೆದ ದುರಂತ ಎಲ್ಲವನ್ನೂ ಅಂತ್ಯಗೊಳಿಸಿತ್ತು.
ದೇವರಿಗೆ ದೀಪಹಚ್ಚಿ ಬೈಕಿನಲ್ಲಿ ಮನೆಯತ್ತ ಸಾಗುತ್ತಿದ್ದ ವೇಳೆ ಕಾಡುಕೋಣ ಡಿಕ್ಕಿಯಾಗಿ ಸಾವನ್ನಪ್ಪಿದವರೇ ಕೊಲ್ಲೂರಿನ ನಿವಾಸಿ, ಸಮಾಜ ಸೇವಕ ಭಾಸ್ಕರ ಗಾಣಿಗ (52).
ಘಟನೆ ವಿವರ: ಎ.27ರಂದು ನಡೆಯಲ್ಲಿದ್ದ ಮಗಳ ಮದುವೆಯ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ದಿನವಿಡೀ ತೊಡಗಿದ್ದ ಭಾಸ್ಕರ್ ಗಾಣಿಗರು ಶನಿವಾರ ಬೆಳಿಗ್ಗೆಯೂ ತಮ್ಮ ಸಂಬಂಧಿಕರು ಸ್ನೇಹಿತರಿಗೆ ಲಗ್ನಪತ್ರಿಕೆ ಹಂಚಿ ಮನೆಗೆ ಬಂದು ಕೊಂಚ ವಿರಮಿಸಿದ ಬಳಿಕ ಸ್ನಾನ ಮುಗಿಸಿ ಕೊಲ್ಲೂರು ಸಮೀಪದ ಮಾಸ್ತಿಕಟ್ಟೆ ದೇವರಿಗೆ ದೀಪ ಹಚ್ಚಿ ಪುನಃ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕೊಲ್ಲೂರು ರಾಜ್ಯ ಹೆದ್ದಾರಿಯ ಎಡಬದಿಯಿಂದ ಕಾಡುಕೋಣವೊಂದು ರಭಸವಾಗಿ ಓಡಿಬಂದು ಭಾಸ್ಕರ ಅವರ ಬೈಕಿಗೆ ಬಲವಾಗಿ ಗುದ್ದಿದೆ. ಅಚಾನಕ್ ದಾಳಿಯಿಂದ ಗಲಿಬಿಲಿಗೊಂಡ ಭಾಸ್ಕರ್ ರಸ್ತೆಗೆ ಬಿದ್ದಿದ್ದು ಬಳಿಕವೂ ಕಾಡುಕೋಣ ಅವರಿಗೆ ಗುದ್ದಿ ದಾಳಿ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಭಾಸ್ಕರ್ ಚೀರಾಟ ಕೇಳಿ ಸ್ಥಳೀಯರು ಆಗಮಿಸಿದ್ದು ಕೂಡಲೇ ಅವರನ್ನು 108 ಆಂಬುಲೆನ್ಸ್ ವಾಹನದ ಮೂಲಕ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ ಭಾಸ್ಕರ ಗಾಣಿಗರವರು ಚಿಕಿತ್ಸೆ ಫಲಾಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ಕೊಲ್ಲೂರು ಪರಿಸರದಲ್ಲಿ ತನ್ನ ಕೈಯಲ್ಲಾದಷ್ಟು ಉಪಕಾರ ಮಾಡುವ ಮೂಲಕ ಸದಾ ಜನರ ಜೊತೆ ಬೆರೆತು ಪರೋಪಕರಿಯಾಗಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಭಾಸ್ಕರ್ ಗಾಣಿಗ ಅವರ ಅಕಾಲಿಕ ಸಾವು ಊರಿನ ಜನರನ್ನು ಶೋಕತಪ್ತರನ್ನಾಗಿಸಿದೆ. ಗಾಣಿಗರು ಪತ್ನಿ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಭಾಸ್ಕರ್ ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ ಅವರ ಸಹೋದರ.
ಇನ್ನು ಕೊಲ್ಲೂರು-ಹೆಮ್ಮಾಡಿ ರಾಜ್ಯ ಹೆದ್ದಾರಿ ನಡುವಿನ ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಅತಿಯಾಗಿದೆ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ.